ಕಾನ್ಪುರ, ನ. 20– ಆಡಿದ ಮೊದಲ ಟೆಸ್ಟ್ನಲ್ಲೇ ಶತಕ. ಮೈಸೂರಿನ ಜಿ.ಆರ್. ವಿಶ್ವನಾಥ್ ಮೆರೆಸಿದ ಪರಾಕ್ರಮ.ಆಟ ಅತ್ಯಾಕರ್ಷಕ; ಎಂದೂ ಎಲ್ಲರ ನೆನಪಿನಲ್ಲಿ ಹಸಿರು. ತನಗೆ, ತನ್ನ ತಂಡಕ್ಕೆ ಕೀರ್ತಿ. ಪರಿಣಾಮ: ಭಾರತ–ಆಸ್ಟ್ರೇಲಿಯಾ ನಡುವಣ ಎರಡನೆಯ ಟೆಸ್ಟ್ ಪಂದ್ಯ ‘ಡ್ರಾ’.
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಶಾಖೆಯ ನೌಕರ 21 ವರ್ಷ ವಯಸ್ಸಿನ ಜಿ.ಆರ್. ವಿಶ್ವನಾಥ್ ಅವರು ಇಂದು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ‘ಉತ್ಕೃಷ್ಟ ಆಟಗಾರರ ಸಮೂಹ’ಕ್ಕೆ ಸೇರಿದರು.
ಉತ್ತರ ಪ್ರದೇಶ: ಬಿಕ್ಕಟ್ಟಿನ ಬಿರುಗಾಳಿ
ಲಖನೌ, ನ. 20– ಪ್ರಧಾನಿಯ ಬೆಂಬಲಿಗರಾದ ಉಪಮುಖ್ಯಮಂತ್ರಿ ಕಮಲಾಪತಿ ತ್ರಿಪಾಠಿ ಮತ್ತು ಅವರ ಗುಂಪಿನ 7 ಮಂದಿ ಸಚಿವರು ಇಂದು ಉತ್ತರ ಪ್ರದೇಶದ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಕಾಂಗ್ರೆಸ್ ಒಡೆದು ಎರಡಾಗಿರುವ ಅಂತಃಕಲಹದ ಕಿಡಿ ಉತ್ತರ ಪ್ರದೇಶದ ರಾಜಕೀಯವನ್ನು ಸ್ಫೋಟಕ ಸ್ಥಿತಿಗೆ ತಂದಿದೆ.
ವಯಲೆಟ್ ಆಳ್ವಾ ನಿಧನ
ನವದೆಹಲಿ, ನ. 20– ರಾಜ್ಯಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವಯೊಲೆಟ್ ಆಳ್ವಾ ಅವರು ಇಂದು ಬೆಳಿಗ್ಗೆ ಇಲ್ಲಿ ನಿಧನರಾದರು. ಅವರಿಗೆ ಅರವತ್ತು ವರ್ಷ ವಯಸ್ಸಾಗಿತ್ತು.