ಕೊಟ್ಟಾಯಂ/ಕೊಚ್ಚಿ:ರೋಮನ್ ಕ್ಯಾಥೋಲಿಕ್ ಬಿಷಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಕ್ರೈಸ್ತ ಸನ್ಯಾಸಿನಿ, ಪ್ರಕರಣದಲ್ಲಿ ‘ರಾಜಕೀಯ ಮತ್ತು ಹಣದ’ ಪ್ರಭಾವ ಕೆಲಸ ಮಾಡುತ್ತಿದ್ದು, ಇದನ್ನು ತಪ್ಪಿಸಿ ನ್ಯಾಯ ಕೊಡಿಸಬೇಕು ಎಂದು ಭಾರತದಲ್ಲಿ ವ್ಯಾಟಿಕನ್ ಸಿಟಿ ಪ್ರತಿನಿಧಿಗೆ ಪತ್ರ ಬರೆದಿದ್ದಾರೆ.
ಗಿಯಾಂಬಟ್ಟಿಸ್ಟಾ ಡಿಕ್ವಾಟ್ರೊ ಅವರಿಗೆ ಪತ್ರ ಬರೆದಿರುವ ಸನ್ಯಾಸಿನಿ, ‘ಈ ಪ್ರಕರಣದಲ್ಲಿ ತಾವು ಕೂಡಲೇ ಮಧ್ಯಪ್ರವೇಶಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಜಲಂಧರ್ನ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಈ ಆರೋಪ ಮಾಡಲಾಗಿದ್ದು, ತಮ್ಮ ಸಂಪತ್ತು ಮತ್ತು ಅಧಿಕಾರವನ್ನು ಬಳಸಿ ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಪತ್ರದ ಪ್ರತಿಯನ್ನು ಭಾರತೀಯ ಕ್ಯಾಥೋಲಿಕ್ ಬಿಷಪ್ಗಳ ಒಕ್ಕೂಟದ ಅಧ್ಯಕ್ಷ ಕಾರ್ಡಿನಲ್ ಒಸ್ವಾಲ್ಡ್ ಗ್ರೇಷಿಯಸ್ ಮತ್ತು ದೆಹಲಿ ಆರ್ಚ್ಬಿಷಪ್ ಅನಿಲ್ ಕೋಟೊ ಸೇರಿದಂತೆ 21 ಗಣ್ಯರಿಗೆ ಸನ್ಯಾಸಿನಿ ಕಳುಹಿಸಿದ್ದಾರೆ.