ಅಹಮದಾಬಾದ್:2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತೊಬ್ಬನಿಗೆ ಎಸ್ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಯಾಕುಬ್ ಪಟಾಲಿಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಪ್ರಕರಣ ನಡೆದ ಹದಿನಾರು ವರ್ಷಗಳ ಬಳಿಕ 2018ರಲ್ಲಿ ಈತನನ್ನು ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದಎಸ್ಐಟಿ ವಿಶೇಷ ನ್ಯಾಯಾಧೀಶ ಎಚ್.ವಿ.ವೋರಾ ಈ ತೀರ್ಪು ನೀಡಿದ್ದಾರೆ.
ಸಾಬರಮತಿ ಕೇಂದ್ರೀಯ ಕಾರಾಗೃಹದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ವಿಚಾರಣೆ ನಡೆಸಲಾಗಿತ್ತು.
ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, 2011ರಂದುಎಸ್ಐಟಿ ವಿಶೇಷ ಕೋರ್ಟ್ 31 ಮಂದಿಯನ್ನು ದೋಷಿ ಎಂದು ಘೋಷಿಸಿತ್ತು. 11 ಮಂದಿಗೆ ಗಲ್ಲು ಶಿಕ್ಷೆ, 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
2017ರಲ್ಲಿ 11 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಜೀವಾವಧಿಗೆ ಇಳಿಸಿತು.
2002ರ ಫೆಬ್ರುವರಿ 27ರಂದು ರೈಲಿಗೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಕರಸೇವಕರು ಸಜೀವ ದಹನವಾಗಿದ್ದರು. ಇದು ಗುಜರಾತ್ ಇತಿಹಾಸದಲ್ಲಿ ಭೀಕರ ಕೋಮುಗಲಭೆಗೆ ಕಾರಣವಾಗಿತ್ತು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾವಿರ ಮಂದಿ ಬಲಿಯಾಗಿದ್ದರು.