ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಂತಕ ನಾಥೂರಾಂ ಗೋಡ್ಸೆಯ ಜನ್ಮದಿನ ಆಚರಿಸಿದ ಎಂಟು ಮಂದಿಯನ್ನು ಸೂರತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಈ ಎಂಟು ಜನ ಅಖಿಲ ಭಾರತೀಯ ಹಿಂದೂ ಮಹಾಸಭಾದ ಸದಸ್ಯರಾಗಿದ್ದು, ಗೋಡ್ಸೆ 109ನೇ ಜನ್ಮದಿನ ನಿಮಿತ್ತ ಭಾನುವಾರ ಸಂಜೆ ಸಾರ್ವಜನಿಕರಿಗೆ ಸಿಹಿ ಹಂಚಿದ್ದರು. ಅಲ್ಲದೆ, ದೇಗುಲವೊಂದರಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಗೋಡ್ಸೆ ಭಾವಚಿತ್ರದ ಸುತ್ತ ದೀಪ ಬೆಳಗಿಸಿ ಗೌರವ ಸಲ್ಲಿಸಿದ್ದರು.
ಬಂಧಿತರನ್ನು ಹಿರೇನ್ ಮಶ್ರು, ವಾಲಾ ಭಾರ್ವದ್, ವಿರಳ್ ಮಾಲ್ವಿ, ಹಿತೇಶ್ ಸೊನಾರಾ, ಮನೀಶ್ ಕಲಾ ಮತ್ತು ಯೋಗೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.
‘ಹಂತಕ ಗೋಡ್ಸೆಯನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಹೊಗಳುತ್ತಿವೆ. ಇದರಿಂದ ಉತ್ತೇಜಿತರಾದ ಭಾರತೀಯ ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಡ್ಸೆ ಜನ್ಮದಿನ ಆಚರಿಸಿದ್ದಾರೆ’ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಟ್ವೀಟ್ ಮಾಡಿದ್ದಾರೆ.