ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ದಮನ್ ಮತ್ತು ದಿಯು, ದಾದ್ರ ಮತ್ತು ನಗರ್ ಹವೇಲಿಯನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸಂಸತ್ನಲ್ಲಿ ಮಂಗಳವಾರ ಈ ಸಂಬಂಧ ಮಸೂದೆಯನ್ನು ಮಂಡಿಸಿದ್ದಾರೆ.
ಈ ಎರಡೂ ಕೇಂದ್ರಾಡಳಿತ ಪ್ರದೇಶಗಳ ನಡುವಿನ ಅಂತರ ಕೇವಲ 35 ಕಿ.ಮೀ. ಇದ್ದು, ದಾದ್ರ, ನಗರ್ ಹವೇಲಿಯಲ್ಲಿ ಒಂದು ಜಿಲ್ಲೆ ಇದ್ದರೆ, ದಮನ್ ಮತ್ತು ದಿಯುನಲ್ಲಿ ಎರಡು ಜಿಲ್ಲೆಗಳಿವೆ. ಆದಾಗ್ಯೂ, ಈ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತ್ಯೇಕ ಸಚಿವಾಲಯ ಇದ್ದು, ಪ್ರತ್ಯೇಕವಾಗಿಯೇ ಬಜೆಟ್ ಮಂಡನೆಯಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಮೂರು ತಿಂಗಳ ಹಿಂದೆ ರದ್ದು ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿದೆ. ಇದರೊಂದಿಗೆ ದೇಶದಲ್ಲಿನ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೇರಿದೆ. ಉದ್ದೇಶಿತ ವಿಲೀನ ಪ್ರಕ್ರಿಯೆ ಪೂರ್ಣಗೊಂಡರೆ ಈ ಸಂಖ್ಯೆ 8ಕ್ಕೆ ಇಳಿಯಲಿದೆ.