ನವದೆಹಲಿ:ಆರ್ಥಿಕವಾಗಿ ಹಿಂದುಳಿದಸಾಮಾನ್ಯ ವರ್ಗದವರಿಗೂ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
‘ಯೂತ್ ಫಾರ್ ಈಕ್ವಾಲಿಟಿ’ ಸಂಘಟನೆ ಮತ್ತು ಕೌಶಲ್ ಕಾಂತ್ ಮಿಶ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದು, ಮೀಸಲಾತಿ ನಿರ್ಧರಿಸಲು ಆರ್ಥಿಕತೆಯೊಂದೇ ಮಾನದಂಡವಾಗಲಾರದು. ಹೀಗಾಗಿ ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಆರ್ಥಿಕತೆ ಆಧಾರದ ಮೀಸಲಾತಿಯನ್ನು ಸಾಮಾನ್ಯ ವರ್ಗಕ್ಕೆ ಮಾತ್ರ ಮೀಸಲಾಗಿರಿಸಬಾರದು ಮತ್ತು ಮೀಸಲಾತಿ ಮಿತಿ ಶೇ 50 ದಾಟಬಾರದು ಎಂಬ ಸಂವಿಧಾನದ ಮೂಲ ಆಶಯಕ್ಕೆ ನೂತನ ಮಸೂದೆಯಿಂದ ಧಕ್ಕೆಯಾಗಿದೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೂ ಶೇ 10ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಗೆ ಸಂಸತ್ನ ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ.