ಶಿರಹಟ್ಟಿ: ‘ಬನ್ನಿಕೊಪ್ಪ ಸೇರಿದಂತೆ ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಕುಸಿದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂತಹ ಶಾಲೆಗಳನ್ನು ಗುರುತಿಸಿ, ಅಲ್ಲಿಗೆ ಉತ್ತಮ ಶಿಕ್ಷಕರನ್ನು ನಿಯೋಜಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಉಮಾ ಹೊನಗಣ್ಣವರ ಆಗ್ರಹಿಸಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸಂಪುರ್ಣ ಕುಸಿದಿದೆ. ಮೇಲಾಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳಬೇಕು’ ಎಂದರು.
‘ಸ್ಥಳೀಯ ಅರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಕರಿಗೌಡರ ಅವರು ಅಂಗವಿಕಲರಿಗೆ ಪ್ರಮಾಣಪತ್ರ ನೀಡದೇ ಸತಾಯಿಸುತ್ತಿರುವ ಕುರಿತು ಹಲವು ಬಾರಿ ವರದಿಯಾಗಿದ್ದರೂ, ಇಲಾಖೆ ಮೇಲಾಧಿಕಾರಿಗಳು ಸುಮ್ಮನಿರುವುದು ಯಾವ ಕಾರಣಕ್ಕೆ ಎಂಬದು ಅರ್ಥವಾಗುತ್ತಿಲ್ಲ.
ಪಟ್ಟಣದಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡುವ ಬದಲು, ಗದಗ ನಗರಕ್ಕೆ ಬನ್ನಿ ಎಂದು ಅಂಗವಿಕಲರಿಗೆ ತೊಂದರೆ ಕೊಡುತ್ತಿದ್ದಾರೆ’ ಎಂದು ಉಪಾಧ್ಯಕ್ಷೆ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ. ಗಿರೀಶ ಮರಡ್ಡಿ ಅವರ ಗಮನಕ್ಕೆ ತಂದರು.
‘ಡಾ. ಕರಿಗೌಡರ ಅವರಿಗೆ ಲಿಖಿತ ಎಚ್ಚರಿಕೆ ನೀಡಲಾಗುವುದು’ ಎಂದು ಮರಡ್ಡಿ ಸಭೆಗೆ ತಿಳಿಸಿದರು. ಅಧ್ಯಕ್ಷ ಈಶಪ್ಪ ಲಮಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಪರಶುರಾಮ ಇಮ್ಮಡಿ ಇದ್ದರು.