ನವದೆಹಲಿ:ದೆಹಲಿಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಕೈಗೂಡದಿದ್ದರೂ, ಹರಿಯಾಣದಲ್ಲಾದರೂ ಮೈತ್ರಿ ಮಾಡಿಕೊಳ್ಳೋಣ ಎಂದು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.ಎಎಪಿ ಹಾಗೂ ಜೆಜೆಪಿ ರಚಿಸಿಕೊಂಡಿರುವ ಮೈತ್ರಿಕೂಟ ಸೇರುವಂತೆ ಅರವಿಂದ ಕೇಜ್ರಿವಾಲ್ ಅವರು ಕಾಂಗ್ರೆಸ್ಗೆ ಮನವಿ ಮಾಡಿದ್ದಾರೆ.
‘ಬಿಜೆಪಿಯನ್ನು ಸೋಲಿಸಲು ಒಂದಾಗೋಣ ಬನ್ನಿ’ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ. ತಕ್ಷಣವೇ ಇದಕ್ಕೆ ತಿರುಗೇಟು ನೀಡಿರುವ ಜೆಜೆಪಿ, ಕಾಂಗ್ರೆಸ್ ಜತೆ ಮೈತ್ರಿ ಎಂದಿಗೂ ಅಸಾಧ್ಯ ಎಂದಿದೆ.
‘ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಹೋರಾಡಿದ್ದ ಚೌಧರಿ ದೇವಿ ಲಾಲ್ ಅವರ ಸಿದ್ಧಾಂತಗಳ ಆಧಾರದ ಮೇಲೆ ಪಕ್ಷ ರಚನೆಯಾಗಿದೆ. ಹೀಗಾಗಿ ಕಾಂಗ್ರೆಸ್ ಜತೆ ಎಂದಿಗೂ ಹೊಂದಾಣಿಕೆ ಸಾಧ್ಯವಿಲ್ಲ. ಕಾಂಗ್ರೆಸ್ ಇರುವ ಮೈತ್ರಿಕೂಟದ ಭಾಗವಾಗಲು ಪಕ್ಷ ಸಿದ್ಧವಿಲ್ಲ’ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.