ನವದೆಹಲಿ: ಭಾರತದಲ್ಲಿ 2018ರಲ್ಲಿ 218 ದ್ವೇಷಾಪರಾಧಗಳು ನಡೆದಿವೆ. ಉತ್ತರ ಪ್ರದೇಶ ಮತ್ತು ಗುಜರಾತ್ನಲ್ಲಿ ಇಂತಹ ಅತಿ ಹೆಚ್ಚು ಕೃತ್ಯಗಳು ನಡೆದಿವೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯ ವರದಿ ಹೇಳಿದೆ.
ಮಾಧ್ಯಮ ವರದಿಗಳು ಮತ್ತು ಸಂಸ್ಥೆಯ ಸಂವಹನಾತ್ಮಕ ವೆಬ್ಸೈಟ್ ‘ಹಾಲ್ಟ್ ದ ಹೇಟ್’ನಲ್ಲಿ ದಾಖಲಾದ ಮಾಹಿತಿ ಕಲೆ ಹಾಕಿ ಈ ವರದಿ ಸಿದ್ಧಪಡಿಸಲಾಗಿದೆ.
ಸತತ ಮೂರು ವರ್ಷಗಳಿಂದ ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿಯೇ ಇದೆ. 2017ರಲ್ಲಿ ಇಲ್ಲಿ ಇಂತಹ 50 ಪ್ರಕರಣಗಳು ದಾಖಲಾಗಿದ್ದರೆ 2016ರಲ್ಲಿ 60 ಪ್ರಕರಣಗಳು ವರದಿಯಾಗಿದ್ದವು.
ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋಹತ್ಯೆ ಆರೋಪದಲ್ಲಿ ಅಖ್ಲಾಕ್ ಎಂಬವರನ್ನು ಗುಂಪು ದಾಳಿಯಲ್ಲಿ ಹತ್ಯೆ ಮಾಡಿದ ಬಳಿಕ ಇಂತಹ ಪ್ರಕರಣಗಳ ಮೇಲೆ ನಿಗಾ ಇರಿಸಲು ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಆರಂಭಿಸಿತ್ತು.
ಅಖ್ಲಾಕ್ ಹತ್ಯೆಯ ಬಳಿಕ ಉತ್ತರ ಪ್ರದೇಶದಲ್ಲಿ ದ್ವೇಷರಾಧದ 721 ಶಂಕಿತ ಪ್ರಕರಣಗಳು ನಡೆದಿವೆ. ಹೆಚ್ಚಿನವುಗಳಲ್ಲಿ ದಲಿತರು ಮತ್ತು ಮುಸ್ಲಿಮರೇ ಸಂತ್ರಸ್ತರು. ದ್ವೇಷಾಪರಾಧದಲ್ಲಿ ಗೋವಿಗೆ ಸಂಬಂಧಿಸಿದ ಹತ್ಯೆಗಳು ಮತ್ತು ಮರ್ಯಾದೆಗೇಡು ಹತ್ಯೆಗಳೇ ಹೆಚ್ಚಾಗಿವೆ ಎಂದು ವರದಿ ಹೇಳಿದೆ.