ನವದೆಹಲಿ: ರಾಷ್ಟ್ರಪತಿಗಳ ಅಂಗರಕ್ಷಕರ ನೇಮಕಕ್ಕೆ ಕೇವಲ ಮೂರು ಜಾತಿಗಳನ್ನು ಮಾತ್ರ ಪರಿಗಣಿಸುವ ನಿರ್ಧಾರದ ಬಗ್ಗೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಹಾಗೂ ಸೇನಾ ಮುಖ್ಯಸ್ಥರಿಂದ ಅಭಿಪ್ರಾಯ ಕೋರಿ ನೋಟಿಸು ಜಾರಿ ಮಾಡಿದೆ.
ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು 2019ರ ಮೇ 8ಕ್ಕೆ ಮುಂದೂಡಿತು. ಈ ಕುರಿತು ಮತ್ತಷ್ಟು ಮಾಹಿತಿ ನೀಡಬೇಕಿದ್ದರೆ ಮುಂದಿನ ವಿಚಾರಣೆಯೊಳಗೆ ಸಲ್ಲಿಸಬಹುದು ಎಂದು ಕೋರ್ಟ್ ಹೇಳಿದೆ.
ರಾಷ್ಟ್ರಪತಿ ಅಂಗರಕ್ಷಕರ ನೇಮಕಾತಿಗೆ ಜಾಟ್, ರಜಪೂತ್ ಹಾಗೂ ಜಾಟ್ ಸಿಖ್ ಜಾತಿಯವರನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಆರೋಪಿಸಿ ಹರಿಯಾಣ ನಿವಾಸಿ ಗೌರವ್ ಯಾದವ್ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
‘2017ರ ಸೆಪ್ಟೆಂಬರ್ 4 ರಂದು ಅಂಗರಕ್ಷಕರ ನೇಮಕಾತಿ ನಡೆದಿತ್ತು. ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದರೂ ನನ್ನ ನೇಮಕಾತಿ ಆಗಲಿಲ್ಲ. ಇದಕ್ಕೆ ನಾನು ಆಹಿರ್/ಯಾದವ್ ಜಾತಿಗೆ ಸೇರಿದ್ದು ಕಾರಣ’ ಎಂದು ಅವರು ಆರೋಪಿಸಿದ್ದರು.