ನವದೆಹಲಿ: ‘ನೂತನ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ವಿಳಂಬವಾಗಿರುವುದುಮೊದಲ ಬಾರಿ ಅಲ್ಲ. ವಿಳಂಬಕ್ಕೆ ಕಾರಣ ಏನು ಎಂಬುದನ್ನು ಕಾಂಗ್ರೆಸ್ ಪಕ್ಷದವರನ್ನೇ ಕೇಳಬೇಕು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನಿಂದ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು ಬಾಕಿ ಇದೆ. ಲೋಕಸಭೆ ಚುನಾವಣೆ ನಂತರ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್– ಜೆಡಿಎಸ್ ಮೈತ್ರಿಯು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಯಲಿದೆ. ಆದರೆ, ಕ್ಷೇತ್ರ ಹಂಚಿಕೆ ಕುರಿತು ಯಾವುದೇ ಗೊಂದಲಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ ಅವರಿಗೆ ಎಲ್ಲ ಅಧಿಕಾರವನ್ನೂ ನೀಡಲಾಗಿದೆ. ಅವರಿಗೆ ಇನ್ನಷ್ಟು ಅಧಿಕಾರ ಬೇಕಿದ್ದರೆ ಕೇಳಲಿ. ಕೊಟ್ಟರಾಯಿತು’ ಎಂದು ಅವರು ಪ್ರತಿಕ್ರಿಯೆ ನೀಡಿದರು.