ಮಾಲ್ಡ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥ ಯಾತ್ರೆಯನ್ನು ತಡೆಯಲು ಮುಂದಾಗುವವರ ತಲೆಗಳನ್ನು ರಥದ ಚಕ್ರಕ್ಕೆ ಬಲಿ ಕೊಡಲಾಗುವುದು ಎಂದು ಪಶ್ಚಿಮ ಬಳಗಾಳದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ನಟಿ ಲಾಕೇಟ್ ಚಟರ್ಜಿ ತಿಳಿಸಿದ್ದಾರೆ.
ಮಾಲ್ಡದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿ ಅವರ ಮಾತನಾಡಿದರು. ಪಶ್ಚಿಮ ಬಂಗಾಳ ಬಿಜೆಪಿ ಘಟಕವು ಬರುವ ಡಿಸೆಂಬರ್ನಲ್ಲಿ5, 6 ಮತ್ತು 7ರಂದು 42 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಥಯಾತ್ರೆ ನಡೆಸಲು ಉದ್ದೇಶಿಸಿದೆ. ಈ ರಥಯಾತ್ರೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಕೋಲ್ಕತ್ತದಲ್ಲಿ ಹಲವು ಸಮಾವೇಶಗಳನ್ನು ನಡೆಸುವುದರ ಜತೆಗೆರಥಯಾತ್ರೆಯ ಸಮರೋಪ ಸಮಾರಂಭವನ್ನು ಇಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಬಂಗಾಳ ಬಿಜೆಪಿ ಘಟಕ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಮರಳಿ ಸ್ಥಾಪಿಸುವ ಉದ್ದೇಶದಿಂದ ಈ ರಥ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ. ರಥ ಯಾತ್ರೆಯನ್ನು ತಡೆಯುವ ಉದ್ದೇಶ ಇರುವವರಿಗೆ ಈಗಲೇ ಹೇಳುತ್ತಿದ್ದೇವೆ, ರಥ ಯಾತ್ರೆಯನ್ನು ತಡೆಯಲು ಮುಂದಾದರೆ ಅವರ ತಲೆಗಳನ್ನು ರಥದ ಚಕ್ರಕ್ಕೆ ಬಲಿಕೊಡಲಾಗುವುದು ಎಂದು ಲಾಕೇಟ್ ಚಟರ್ಜಿ ತಿಳಿಸಿದ್ದಾರೆ.
ಲಾಕೇಟ್ ಚಟರ್ಜಿ ಅವರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕರು ಜನರನ್ನು ಕೆರಳಿಸುವಂತಹ, ರಾಜ್ಯದಲ್ಲಿ ಶಾಂತಿ ಹಾಗೂಸ್ಥಿರತೆಯನ್ನು ಕದಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಎಂದು ಆರೋಪಿಸಿದ್ದಾರೆ.
ಬಂಗಾಳದಲ್ಲಿ ಕೋಮುವಾದ ಪಸರಿಸುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಜನರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಯಾಕೆ ನೀಡುತ್ತೀರಾ, ಈಗಾಗಲೇ ಬಂಗಾಳದ ಜನರು ರಾಜಕೀಯವಾಗಿ ಬಿಜೆಪಿಯನ್ನು ಸೋಲಿಸಿದ್ದಾರೆ ಎಂದು ಪಾರ್ಥ ಚಟರ್ಜಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.