ನವದೆಹಲಿ: ದೇಶದಲ್ಲಿನ ಕೋವಿಡ್-19 ರೋಗ ಸ್ಥಿತಿಗತಿಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್, ಐಸೋಲೇಷನ್ ಅಂದರೆ ತಪಸ್ಸಿನಂತೆ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಇದು ಅತ್ಯಗತ್ಯ ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಗುರುವಾರದವರೆಗೆದೇಶದಲ್ಲಿ 1,965 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. 50 ಮಂದಿ ಸಾವಿಗೀಡಾಗಿದ್ದು 151ಮಂದಿ ಗುಣಮುಖರಾಗಿದ್ದಾರೆ.ಕಳೆದ 12 ಗಂಟೆಗಳಲ್ಲಿ 328 ಹೊಸ ಪ್ರಕರಣಗಳು ವರದಿಯಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯವು 9000 ತಬ್ಲಿಗಿ ಜಮಾತ್ ನೌಕರರನ್ನು ಮತ್ತು ಅವರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ನಲ್ಲಿರಿಸಿದೆ. ಈ ಪೈಕಿ 1306 ಮಂದಿ ವಿದೇಶಿಯರಾಗಿದ್ದು, ಉಳಿದವರು ಭಾರತೀಯರು ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಹೇಳಿದ್ದಾರೆ.
1.5 ಕೋಟಿ ಪಿಪಿಇಗಳಿಗೆ ನಾವು ಆರ್ಡರ್ ನೀಡಿದ್ದು, ಅದರ ಪೂರೈಕೆ ಆರಂಭವಾಗಿದೆ. ರಾಜ್ಯಗಳಿಗೂ ಪಿಪಿಇಗಳನ್ನು ಕಳುಹಿಸಲಾಗಿದೆ.1 ಕೋಟಿಗಿಂತಲೂ ಹೆಚ್ಚು ಎನ್95 ಮಾಸ್ಕ್ಗೆ ಆರ್ಡರ್ ನೀಡಿದ್ದೇವೆ ಎಂದಿದ್ದಾರೆ ಲವ್ ಅಗರವಾಲ್.ದೆಹಲಿಯ ಹಿಂದೂ ರಾವ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಸರಿಯಾದ ರಕ್ಷಣಾ ಸಾಧನಗಳು ಇಲ್ಲ ಎಂದು ಅಲ್ಲಿನ ವೈದ್ಯರು ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಬಗ್ಗೆ ಕೇಳಿದ ಪ್ರಶ್ನೆಗೆ ಲವ್ ಅಗರವಾಲ್ ಈ ಉತ್ತರ ನೀಡಿದ್ದಾರೆ.
ಮುಂಬೈಯ ಧಾರಾವಿಯಲ್ಲಿ ಕೋವಿಡ್ ರೋಗ ಪತ್ತೆಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಿರ್ದಿಷ್ಟ ಕಾಲೊನಿಯಲ್ಲಿರುವ ಕಟ್ಟಡಗಳಿಗೆ ಮುದ್ರೆಯೊತ್ತಿ ಅಲ್ಲಿನ ಜನರ ಸ್ಯಾಂಪಲ್ಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದೇವೆ. ಅವರ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದಿದ್ದಾರೆ.