ಬೆಂಗಳೂರು: ದಲಿತ ಸೇವಾ ಸಂಘ ಹಾಗೂ ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರವನ್ನು ರಥದಲ್ಲಿಟ್ಟು ಎಚ್ಎಸ್ಆರ್ ಬಡಾವಣೆಯಿಂದ ಬೊಮ್ಮನಹಳ್ಳಿಯವರೆಗೆ ಮೆರವಣಿಗೆ ಮಾಡಲಾಯಿತು. ಇದಕ್ಕೆ ದಲಿತ ಸೇವಾ ಸಂಘದ ಅಧ್ಯಕ್ಷ ಜೆ.ಚಂದ್ರಪ್ಪ ಚಾಲನೆ ನೀಡಿದರು. ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ಹೊಸೂರು ರಸ್ತೆ ಕೂಡ್ಲುಗೇಟ್ನಿಂದ ಎಚ್ಎಸ್ಆರ್ ಬಡಾವಣೆವರೆಗೆ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
ಬೊಮ್ಮನಹಳ್ಳಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವೃದ್ಧರಿಗೆ ಬಟ್ಟೆ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
‘ದಲಿತರು, ಶೋಷಿತರು, ಬಡವರ ಏಳಿಗೆಗೆ ಅಂಬೇಡ್ಕರ್ ಶ್ರಮಿಸಿದ್ದರು. ಭಾರತ ಸಂವಿಧಾನವು ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನಕ್ಕೆ ಎಂಬ ಹಿರಿಮೆಗೆ ಪಾತ್ರವಾಗಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ’ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರು.
ದಲಿತರ ಆಹಾರ ಪದ್ಧತಿಯನ್ನು ಕೆಲವರು ಟೀಕಿಸುತ್ತಿದ್ದಾರೆ. ಅವರಿಗೆ ತಿರುಗೇಟು ನೀಡುವ ಉದ್ದೇಶದಿಂದ ಹಾಗೂ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮಟನ್ ಸೂಪ್ ನೀಡಲಾಗಿದೆ ಎಂದು ದಲಿತ ಸೇವಾ ಸಂಘದ ರಮೇಶ್ ತಿಳಿಸಿದರು.