ಶಿಮ್ಲಾ: ದೇಶದಾದ್ಯಂತ ಇಂದಿನಿಂದ ನಾಲ್ಕನೇ ಹಂತದ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯೊಂದಿಗೆ ಜಾರಿಯಲ್ಲಿದ್ದರೆ, ಹಿಮಾಚಲ ಪ್ರದೇಶದಲ್ಲಿ ಹೇರಿರುವ ಕರ್ಫ್ಯೂ ಮೇ 31ರವರೆಗೂ ಮುಂದುವರಿಯಲಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ತಿಳಿಸಿದ್ದಾರೆ.
ಲಾಕ್ಡೌನ್ 4.0 ಮೇ 18 ರಿಂದ ಪ್ರಾರಂಭವಾಗಲಿದ್ದು, ಹಿಮಾಚಲ ಪ್ರದೇಶದಲ್ಲಿ ಹೇರಿದ ಕರ್ಫ್ಯೂವನ್ನು ಮೇ 31ರವರೆಗೆ ಮುಂದುವರಿಸುವುದಾಗಿ ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರವಷ್ಟೇ ರಾಜ್ಯದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್-19 ದೃಢಪಟ್ಟಿರುವ ಕುರಿತು ಆರೋಗ್ಯ ಇಲಾಖೆಯು ಮಾಹಿತಿ ನೀಡಿತ್ತು. ಈ ಮೂಲಕ ಸೋಂಕಿತರ ಸಂಖ್ಯೆಯು 78ಕ್ಕೆ ಏರಿಕೆಯಾಗಿದೆ. ಈ ಪೈಕಿ 31 ಪ್ರಕರಣಗಳು ಸಕ್ರಿಯವಾಗಿದ್ದರೆ, 3 ಜನರು ಮೃತಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ಜಾರಿಯಲ್ಲಿದ್ದ ಕೋವಿಡ್-19 ಪ್ರೇರಿತ ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ಭಾನುವಾರ ಮೇ 31 ರವರೆಗೆ ವಿಸ್ತರಿಸಿದೆ. ಆದರೆ ಇಂದಿನಿಂದ ಅಂತರರಾಜ್ಯ ವಾಹನ ಸಂಚಾರವೂ ಸೇರಿದಂತೆ ‘ಲಾಕ್ಡೌನ್–4.0’ದ ನಿಯಮಗಳನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೇಂದ್ರದ ಗೃಹ ಸಚಿವಾಲಯ ಈ ಕುರಿತ ಒಂಬತ್ತು ಪುಟಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.