ಐಜ್ವಾಲ್: ಮಿಜೋರಾಂ ವಿಧಾನಸಭೆ ಸ್ಪೀಕರ್ ಹಿಫೆಯಿ ಅವರು, ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ, ಅಲ್ಲಿ ಕಾಂಗ್ರೆಸ್ ಬಿಟ್ಟ ಶಾಸಕರ ಸಂಖ್ಯೆ ಐದಕ್ಕೆ ಏರಿದೆ.
ಮುಖ್ಯಮಂತ್ರಿ ಮತ್ತು ಮಿಜೋರಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಂಪಿಸಿಸಿ) ಮುಖ್ಯಸ್ಥ ಲಾಲ್ ತನ್ಹವ್ಲಾ ಅವರ ಕಾರ್ಯವೈಖರಿಗ ಬೇಸತ್ತು ಪಕ್ಷ ಬಿಡಬೇಕಾಯಿತು ಎಂದು ಅವರು ಹೇಳಿದ್ದಾರೆ.
‘ಜಿಲ್ಲಾ ಪಂಚಾಯಿತಿಗಳಿಗೆ ಹೆಚ್ಚಿನ ಸ್ವಾಯತ್ತೆ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತರುವ ಭರವಸೆಯನ್ನು ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್ ನೀಡಿದ್ದಾರೆ. ಈ ಪಂಚಾಯಿತಿಗಳಿಗೆ ನೇರವಾಗಿ ಅನುದಾನ ಒದಗಿಸುವ ಭರವಸೆಯನ್ನು ಸಹ ಕೇಂದ್ರದ ಬಿಜೆಪಿ ನಾಯಕರು ನೀಡಿದ್ದಾರೆ. ಅದಕ್ಕಾಗಿ ಬಿಜೆಪಿ ಸೇರಿದ್ದೇನೆ’ ಎಂದು 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿಫೆಯಿ ತಿಳಿಸಿದ್ದಾರೆ.