ತಿರುಚಿರಾಪಳ್ಳಿ (ತಮಿಳುನಾಡು): ಪೆರಂಬುಲೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್ಐವಿಪೀಡಿತ ಬಾಲಕನಿಗೆ ಪ್ರವೇಶ ನಿರಾಕರಿಸಲಾಗಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ತಮಿಳುನಾಡು ಶಿಕ್ಷಣ ಇಲಾಖೆ ಆದೇಶಿಸಿದೆ.
ಶಾಲಾ ಶಿಕ್ಷಣ ನಿರ್ದೇಶಕ ಎಸ್. ಕಣ್ಣಪ್ಪನ್ ಅವರು, ಬಾಲಕನ ಪ್ರವೇಶ ನಿರಾಕರಣೆಯ ಕುರಿತು ವರದಿ ಸಲ್ಲಿಸುವಂತೆ ಪೆರಂಬುಲೂರು ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಜಿಲ್ಲೆಯ ಪಕ್ಕದಲ್ಲೇ ಇರುವ ಕೊಲಕ್ಕನಾಥನ್ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಪ್ರವೇಶ ಕೋರಿ ವಾರದ ಹಿಂದೆ ಬಾಲಕ ಅರ್ಜಿ ಸಲ್ಲಿಸಿದ್ದ. ಆದರೆ, ಬುಧವಾರ ಬಾಲಕನಿಗೆ ಪ್ರವೇಶ ದೊರೆಯದೇ ಹಿಂತಿರುಗಿದ ಎನ್ನಲಾಗಿದೆ.
ಬಾಲಕನ ಶೈಕ್ಷಣಿಕ ಸಾಧನೆ ಕಳಪೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಇದೇ ವಿಷಯವಾಗಿ ಮುಖ್ಯೋಪಾಧ್ಯಾಯ ಮತ್ತು ಬಾಲಕನ ಸಂಬಂಧಿಕರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಆದರೆ, ಮುಖ್ಯೋಪಾಧ್ಯಾಯ ಬಾಲಕನಿಗೆ ಶಾಲಾ ಪ್ರವೇಶ ನಿರಾಕರಿಸಿಲ್ಲ ಎಂದಿದ್ದಾರೆ. ‘ಬಾಲಕ ಬಯಸಿದಲ್ಲಿ ಪ್ರವೇಶ ನೀಡಲಾಗುವುದು’ ಎಂದು ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಶಿಕ್ಷಣಾಧಿಕಾರಿ ಅರುಲ್ ರಂಗನ್ ತಿಳಿಸಿದ್ದಾರೆ.