ಭೀಮಾ–ಕೊರೆಗಾಂವ್ ಪ್ರಕರಣ: ಸೆ.12ರವರೆಗೆ ಗೃಹಬಂಧನದ ಅವಧಿ ವಿಸ್ತರಣೆ

ನವದೆಹಲಿ: ಭೀಮಾ–ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐವರು ಸಾಮಾಜಿಕ ಹೋರಾಟಗಾರರ ಗೃಹಬಂಧನವನ್ನು ಗುರುವಾರ ಸುಪ್ರಿಂಕೋರ್ಟ್ ಸೆ.12ರವರೆಗೆ ವಿಸ್ತರಿಸಿದೆ.
ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪುಣೆ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳನ್ನು ಪರಿಶೀಲಿಸಿದರೆ ಬಂಧಿತರು ದೇಶಕ್ಕೆ ಎಂಥ ಹಾನಿ ಮಾಡುತ್ತಿದ್ದರು ಎಂಬುದು ನ್ಯಾಯಾಲಯಕ್ಕೆ ಅರಿವಾಗುತ್ತದೆ. ರೊಮಿಲಾ ಥಾಪರ್ ಮತ್ತು ಇತರ ಅರ್ಜಿದಾರರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಗೃಹ ಬಂಧನದ ಅವಧಿ ವಿಸ್ತರಿಸಿದ ಸುಪ್ರಿಂಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿರುವುದನ್ನು ಕಟುದನಿಗಳಲ್ಲಿ ಆಕ್ಷೇಪಿಸಿತು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಪೊಲೀಸರು ಸೂಕ್ಷ್ಮವಾಗಿ ವರ್ತಿಸಬೇಕು. ಈ ಕುರಿತು ಸರ್ಕಾರ ಪೊಲೀಸರಿಗೆ ಅಗತ್ಯ ಸೂಚನೆ ನೀಡಬೇಕು ಎಂದು ಹೇಳಿತು. ‘ಪ್ರಕರಣದ ವಿವರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು’ ಎನ್ನುವ ಮನವಿಯನ್ನು ತಳ್ಳಿಹಾಕಿತು.
ಐವರು ಹೋರಾಟಗಾರರ ಬಂಧನವನ್ನು ಆಕ್ಷೇಪಿಸಿ ಇತಿಹಾಸಜ್ಞೆ ರೊಮಿಲಾ ಥಾಪರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ಸುಪ್ರಿಂಕೋರ್ಟ್ ವಿಚಾರಣೆಗೆ ತೆಗೆದುಕೊಂಡಿದೆ. ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಆರೋಪದಡಿ ಪುಣೆ ಪೊಲೀಸರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ ಐವರು ಸಾಮಾಜಿಕ ಹೋರಾಟಗಾರರಾದ ವರವರ ರಾವ್, ಸುಧಾ ಭಾರದ್ವಾಜ್, ಅರುಣ್ ಫೆರಾರಿಯಾ, ಗೌತಮ್ ನವಾಲಖ ಮತ್ತು ವರ್ನನ್ ಗೋನ್ಸಾಲ್ವೀಸ್ ಅವರನ್ನು ಬಂಧಿಸಿದ್ದರು.
ಸುಪ್ರಿಂಕೋರ್ಟ್ ಆದೇಶದ ಅನ್ವಯ ಅವರೆಲ್ಲರೂ ಈಗ ಗೃಹಬಂಧನದಲ್ಲಿದ್ದಾರೆ.
ಇವನ್ನೂ ಓದಿ
1) ಭಿನ್ನ ದನಿ ಅಲ್ಲ, ಮಾವೊ ನಂಟು ಸೆರೆಗೆ ಕಾರಣ
2) ನಮ್ಮ ಬಳಿ ಡಿಜಿಟಲ್ ಸಾಕ್ಷ್ಯವಿದೆ: ಹೋರಾಟಗಾರರ ಬಂಧನಕ್ಕೆ ಪೊಲೀಸರ ಸಮರ್ಥನೆ
3) #MeTooUrbanNaxal ಚಳವಳಿಗಾರರ ಬಂಧನ, ಪರ–ವಿರೋಧ ಚರ್ಚೆ
4) ಸುಧಾ ಭಾರದ್ವಾಜ್, ಗೌತಮ್ ನವಾಲಖಾ, ವರ್ನಾನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ, ವರವರರಾವ್ ಅವರ ಪರಿಚಯ
5) ಅಪ್ಪನ ಬಂಧನವನ್ನು ಕಣ್ಣಾರೆ ಕಂಡ ಮಗ ಸಾಗರ್ ಅಬ್ರಾಹಂ ಗೋನ್ಸಾಲ್ವೀಸ್ ಬರೆದ ಅನುಭವ ಕಥನ
6) ಪೊಲೀಸ್ ಶೋಧ ಕಾರ್ಯಾಚರಣೆ ಆತ್ಮಗೌರವಕ್ಕೆ ಧಕ್ಕೆ ತರುವಂತೆ ಇತ್ತು: ಪ್ರಾಧ್ಯಾಪಕ ಕೆ.ಸತ್ಯನಾರಾಯಣ ಪ್ರತಿಕ್ರಿಯೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.