ಬೆಂಗಳೂರು: 'ಆರ್.ಆರ್.ನಗರ ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಈ ಕ್ಷೇತ್ರದ ಚುನಾವಣಾ ಫಲಿತಾಂಶ ತಡೆಹಿಡಿಯಬೇಕು' ಎಂದು ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ನಗರದ "ಸಮರ್ಪಣಾ" ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಹೊಸಮನಿ ಹಾಗೂ ದಯಾನಂದ ತಿಪ್ಪೇರುದ್ರಪ್ಪ ಶುಕ್ರವಾರ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
'ಅರ್ಜಿ ಮೇ 15 ಮಂಗಳವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ' ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ 'ಪ್ರಜಾವಾಣಿ'ಗೆ ತಿಳಿಸಿದರು.
ಅರ್ಜಿಯಲ್ಲಿ ಏನಿದೆ?:
* 2018 ರ ಮೇ 9 ರಂದು ಜಾಲಹಳ್ಳಿಯ ಫ್ಲ್ಯಾಟ್ ನಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದ್ದನ್ನು ಪತ್ತೆ ಹಚ್ಚಲಾಗಿದೆ.
* ಈ ಸಂಬಂಧ ಮುಖ್ಯ ಚುನಾವಣಾ ಅಧಿಕಾರಿ, ಸ್ಥಳೀಯ ಶಾಸಕ ಮುನಿರತ್ನ ನಾಯ್ಡು ಸೇರಿದಂತೆ ೧೦ ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
* ಇದು ವ್ಯಾಪಕ ಭ್ರಷ್ಟಚಾರದ ಪ್ರತೀಕ. ಜನತಾ ಪ್ರಾತಿನಿಧ್ಯ ಕಾಯ್ದೆ -1951ರ ಕಲಂ 123 ರ ಸ್ಪಷ್ಟ ಉಲ್ಲಂಘನೆ.
* ಆದ್ದರಿಂದ ಈ ಕ್ಷೇತ್ರದ ಮತ ಪೆಟ್ಟಿಗೆಗಳನ್ನು ತೆರೆದು ಮತ ಎಣಿಕೆ ನಡೆಸಬಾರದು. ಈ ಅರ್ಜಿ ಇತ್ಯರ್ಥ ಆಗುವವರೆಗೆ ಫಲಿತಾಂಶ ತಡೆ ಹಿಡಿಯಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.