ಮದುರೆ: ಇದೇ 5 ರಂದು ಚೆನ್ನೈನಲ್ಲಿ ರ್ಯಾಲಿ ನಡೆಸಿಯೇ ಸಿದ್ಧ. ನನಗಿರುವ ಬೆಂಬಲಿಗರ ಶಕ್ತಿಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ ಎಂದು ಡಿಎಂಕೆಯ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ ಭಾನುವಾರ ಹೇಳಿದ್ದಾರೆ.
‘ನಾನು ತಲೈವರ್ ( ಎಂ.ಕರುಣಾನಿಧಿ) ಮಗ. ನಾನು ಹೇಳಿದಂತೆಯೇ ಮಾಡುತ್ತೇನೆ’ ಎಂದು ವರದಿಗಾರರಿಗೆ ಅವರು ತಿಳಿಸಿದ್ದಾರೆ. ಆ. 7 ರಂದು ನಿಧನರಾದ ತಂದೆ ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರ್ಯಾಲಿ ಹಮ್ಮಿಕೊಂಡಿರುವ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
ಆದರೆ ಇದೇ ವೇಳೆ, ಪಕ್ಷಕ್ಕೆ ಮರು ಸೇರ್ಪಡೆ ಬಗ್ಗೆ ಡಿಎಂಕೆಯ ಮೌನವಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ‘ನನ್ನ ತಂದೆ ನಿಧನರಾದ ನಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ನನ್ನ ಜತೆಗೇ ಇದ್ದಾರೆ’ ಎಂದರು. ತಾನು ನಡೆಸುವ ರ್ಯಾಲಿಯಿಂದ ಡಿಎಂಕೆಗೆ ಬೆದರಿಕೆ ಇದೆ ಎಂದು ಈ ಹಿಂದೆ ಹೇಳಿದ್ದರು.