ನವದೆಹಲಿ (ಪಿಟಿಐ): ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳನ್ನು ಸ್ಥಳೀಯ ಭಾಷೆಯಲ್ಲಿಯೇ ನಡೆಸುವಂತೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಮನವಿ ಪರಿಶೀಲಿಸುತ್ತಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರಅವಧಿಯ ಬಳಿಕ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರಿಗೆ ಸಚಿವರು ಉತ್ತರಿಸಿದರು.
ಸ್ಥಳೀಯ ಅಭ್ಯರ್ಥಿಗಳಿಗೆ ಅನುಕೂಲ ವಾಗುವಂತೆಬ್ಯಾಂಕ್ ಪರೀಕ್ಷೆಗಳನ್ನು ಇಂಗ್ಲಿಷ್, ಹಿಂದಿ ಜೊತೆ ಕನ್ನಡ ಭಾಷೆಯಲ್ಲೂ ನಡೆಸುವಂತೆ ಚಂದ್ರಶೇಖರ್ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಲಾ, ‘ಲೋಕಸಭೆ ಸದಸ್ಯರೂ ಈ ವಿಚಾರವಾಗಿ ತಮಗೆ ಮನವಿ ಸಲ್ಲಿಸಿದ್ದಾರೆ’ ಎಂದರು.
‘ವಿಷಯ ಗಂಭೀರ ಸ್ವರೂಪದ್ದಾಗಿದೆ. ಈ ಬಗ್ಗೆ ಅಗತ್ಯ ಪರಿಶೀಲನೆ ನಡೆಸಿ ಸದನದಲ್ಲಿ ಮತ್ತೆ ಉತ್ತರಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.
ಚಂದ್ರಶೇಖರ್ ಅವರು ಕನ್ನಡದಲ್ಲಿ ಮಾತನಾಡಿದ ಕಾರಣ ಅದನ್ನು ತರ್ಜುಮೆ ಮಾಡುವ ವ್ಯವಸ್ಥೆ ಇರಲಿಲ್ಲ. ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಸಂಸದರ ಪ್ರಶ್ನೆಯನ್ನು ವಿವರಿಸಿ ಹೇಳಿದರು.