ನವದೆಹಲಿ: 2030ರೊಳಗೆ ದೇಶದಿಂದ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ, ಭಾರತೀಯ ವೈದ್ಯಕೀಯ ಮಂಡಳಿಯು (ಐಸಿಎಂಆರ್) ಸದ್ಯದಲ್ಲೇ ಹೊಸ ಕಾರ್ಯಕ್ರಮ ಆರಂಭಿಸಲಿದೆ.
ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ‘ಮಲೇರಿಯಾ ನಿರ್ಮೂಲನೆ ಸಂಶೋಧನೆ ಒಕ್ಕೂಟ’ ಎಂಬ ವೇದಿಕೆಯಡಿ ವಿವಿಧ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲಿವೆ ಎಂದು ಐಸಿಎಂಆರ್ ಸಂಶೋಧನಾ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ರಜನಿಕಾಂತ್ ಹೇಳಿದ್ದಾರೆ.
ರೋಗಪತ್ತೆ, ಉತ್ತಮ ಔಷಧಿಗಳ ಸಂಶೋಧನೆ ಹಾಗೂ ಸೂಕ್ತ ಸಲಕರಣೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದಿದ್ದಾರೆ. ಮುಂದಿನ ಮೂರು ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಘಟನೆ ಇಲ್ಲಿ ಮುಖ್ಯ ಪಾತ್ರ ವಹಿಸಲಿವೆ. ಕೆಲವು ಬಹುರಾಷ್ಟ್ರೀಯ ಕಂಪನಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಸಚಿವರು ಈ ವೇದಿಕೆಯಲ್ಲಿ ಇರಲಿದ್ದಾರೆ.
2016 ಹಾಗೂ 2017ರಲ್ಲಿ ಕ್ರಮವಾಗಿ 11 ಲಕ್ಷ ಮತ್ತು 8.4 ಲಕ್ಷ ಮಲೇರಿಯಾ ಪ್ರಕರಣ ಭಾರತದಲ್ಲಿ ಪತ್ತೆಯಾಗಿದ್ದವು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 2016ರಲ್ಲಿ 331 ಮಂದಿ ಹಾಗೂ 2017ರಲ್ಲಿ 194 ಮಂದಿ ಮೃತಪಟ್ಟಿದ್ದರು.