ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಸಮುದಾಯ ಪ್ರಸರಣದ ಸ್ಥಿತಿ ತಲುಪಿದೆಯೇ ಎಂಬ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಲಿದೆ. ಗರಿಷ್ಠ ಸಂಖ್ಯೆಯಲ್ಲಿ ಕೋವಿಡ್–19 ಪ್ರಕರಣ ದಾಖಲಾದ 75 ಜಿಲ್ಲೆಗಳಲ್ಲಿ ಅಧ್ಯಯನ ನಡೆಯಲಿದೆ.
ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ಗಳ ಮೂಲಕ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಅವುಗಳಲ್ಲಿ ಲೋಪ ಇರುವುದು ಕಂಡುಬಂದ ಕಾರಣ ಮುಂದೂಡಲಾಗಿತ್ತು. ಈಗ ‘ಎಂಜೈಮ್–ಲಿಂಕ್ಡ್ ಇಮ್ಯುನೊಸರ್ಬೆಂಟ್ ಅಸ್ಸೇ (ಇಎಲ್ಐಎಸ್ಎ) ಟೆಸ್ಟ್ ಕಿಟ್’ ಮೂಲಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
‘ಜನರ ದೇಹದಲ್ಲಿ ಸೋಂಕಿನ ವಿರುದ್ಧದ ರೋಗನಿರೋಧಕ ಕಣಗಳು (ಆ್ಯಂಟಿಬಾಡಿಸ್) ಅಭಿವೃದ್ಧಿಯಾಗಿವೆಯೇ ಇಲ್ಲವೇ ಎಂಬ ಬಗ್ಗೆ ಕೆಂಪು, ಹಸಿರು ಮತ್ತು ಕಿತ್ತಳೆ ವಲಯಗಳವರನ್ನೂ ಯಾದೃಚ್ಛಿಕವಾಗಿ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಐಸಿಎಂಆರ್ ತಿಳಿಸಿದೆ.