ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹಮ್ ನಿಭಾಯೇಂಗೆ (ನಾವು ನೆರವೇರಿಸುತ್ತೇವೆ)ಎಂಬ ಘೋಷಣೆಯೊಂದಿಗೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ವರ್ಷದ ಹಿಂದೆ ನಾವು ಈ ಪ್ರಕ್ರಿಯೆ ಆರಂಭಿಸಿದಾಗ ನಾನು ಶ್ರೀಯುತ ಚಿದಂಬರಂ ಮತ್ತು ಶ್ರೀಯುತ ಗೌಡ ಅವರ ಜತೆ ಮಾತನಾಡಿ ಎರಡು ನಿರ್ದೇಶನಗಳನ್ನು ನೀಡಿದ್ದೆ. ಮುಚ್ಚಿದ ಕೋಣೆಯಲ್ಲಿ ತಯಾರಿಸಿದ ಚುನಾವಣಾ ಪ್ರಣಾಳಿಕೆ ಇದಾಗಿರಬಾರದು ಮತ್ತು ದೇಶದ ಜನರ ಹಿತಾಸಕ್ತಿಯನ್ನು ಪ್ರತಿಫಲಿಸುವ ಅಂಶ ಇದರಲ್ಲಿರ ಬೇಕು ಎಂದು ನಾನು ಹೇಳಿದ್ದೆ ಎಂದಿದ್ದಾರೆ ರಾಹುಲ್.
ರೈತರ ಸಾಲ, ನಿರುದ್ಯೋಗ ಸಮಸ್ಯೆ, ವಾಣಿಜ್ಯೋದ್ಯಮಿಗಳಿಗೆ ಬೆಂಬಲ ನೀಡುವ, ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿದೆ ಎಂದು ರಾಹುಲ್ ಹೇಳಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
* Nyay (ಕನಿಷ್ಠ ಆದಾಯ) ಯೋಜನೆ ಜಾರಿಗೆ ತರುವುದು
*ಗ್ರಾಮ ಪಂಚಾಯತ್ನಲ್ಲಿ10 ಲಕ್ಷ ಯುವಜನರಿಗೆ ಉದ್ಯೋಗ ಭರವಸೆ
*ಉದ್ಯಮ ಆರಂಭಿಸಲು ವಾಣಿಜ್ಯೋದ್ಯಮಿಗಳು ಮೂರು ವರ್ಷದ ವರಗೆ ಯಾರೊಬ್ಬರ ಅನುಮತಿ ಪಡೆಯುವ ಅಗತ್ಯವಿಲ್ಲ.
*ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ಯೋಜನೆಯಡಿಯಲ್ಲಿ ಉದ್ಯೋಗ ಖಾತ್ರಿ ಅವಧಿ 100 ದಿನದಿಂದ 150 ದಿನಕ್ಕೆ ಹೆಚ್ಚಳ ಮಾಡಲಾಗುವುದು
*ರೈತರ ಸಾಲ ಮರುಪಾವತಿ ಮಾಡದೇ ಇದ್ದರೆ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಬದಲು ಅದನ್ನು ನಾಗರಿಕ ಅಪರಾಧ ಎಂದು ಪರಿಗಣಿಸಲಾಗುವುದು.
LIVE: Congress President @RahulGandhi launches 2019 Manifesto. #CongressManifesto2019 https://t.co/th35WGsl63
— Congress (@INCIndia) April 2, 2019
*ಶೇ. 6 ಜಿಡಿಪಿಯನ್ನು ಶಿಕ್ಷಣದ ಅಭಿವೃದ್ಧಿ ಮತ್ತು ಸರ್ಕಾರಿ ಸಂಸ್ಥೆಗಳಿಗಾಗಿ ಬಳಸಲಾಗುವುದು.
*ಸಮಾಜದಲ್ಲಿರುವ ಕಡು ಬಡವರಿಗೆ ಆರೋಗ್ಯ ವಲಯದಲ್ಲಿ ಹೆಚ್ಚಿನ ಸೌಕರ್ಯ ಒದಗಿಸಲಾಗುವುದು.
* ಹೊಸ ಯೋಜನಾ ಆಯೋಗ: ನೀತಿ ಆಯೋಗವನ್ನು ಕೈ ಬಿಟ್ಟು ಹೊಸ ಯೋಜನಾ ಆಯೋಗವನ್ನು ತರಲಾಗುವುದು. ಇದರಿಂದ ಗ್ರಾಮೀಣ ಜನರಿಗೆ ಉದ್ಯೋಗ ಲಭಿಸಲಿದೆ. ಯೋಜನಾ ಆಯೋಗದ ಜವಾಬ್ದಾರಿಗಳನ್ನು ಪುನರ್ ವ್ಯಾಖ್ಯಾನ ಮಾಡಲಾಗುವುದು.
* ಮಾನನಷ್ಟ ಮತ್ತು ದೇಶದ್ರೋಹ ಪ್ರಕರಣ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ರಾಷ್ಟ್ರದ್ರೋಹ) ಮತ್ತು ಸೆಕ್ಷನ್ 499 (ಮಾನನಷ್ಟ) ಪ್ರಕರಣಗಳನ್ನು ನಾಗರಿಕ ಅಪರಾಧ ಎಂದು ಪರಿಗಣಿಸಲಾಗುವುದು.
* ನೀಟ್ ಕೈಬಿಡಲಾಗುವುದು: ತಮಿಳುನಾಡಿನವಿಪಕ್ಷಗಳು ನೀಟ್ ಪರೀಕ್ಷೆ ರದ್ದು ಪಡಿಸಬೇಕೆಂದು ಒತ್ತಾಯಿಸಿದ್ದವು.ಹಾಗಾಗಿ ನೀಟ್ ಪರೀಕ್ಷೆಯನ್ನುಕೈ ಬಿಡುವುದಾಗಿ ಹೇಳಿದ ಕಾಂಗ್ರೆಸ್ ಇದಕ್ಕೆ ಬದಲಾಗಿ ರಾಜ್ಯ ಮಟ್ಟದ ಪರೀಕ್ಷೆ ನಡೆಸಲಾಗುವುದು ಎಂದಿದೆ. ಆ ದಾಗ್ಯೂ, ಕಾಂಗ್ರೆಸ್ ಮೈತ್ರಿ ಪಕ್ಷವಾದ ಡಿಎಂಕೆ ಕೂಡಾ ನೀಟ್ ಕೈ ಬಿಡುವುದಾಗಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು.
* ಆಂಧ್ರಕ್ಕೆ ವಿಶೇಷ ಸ್ಥಾನಮಾನ
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಪುದುಚೇರಿಗೆ ರಾಜ್ಯತ್ವ ನೀಡಲಾಗುವುದು.
*ಟ್ರಾನ್ಸ್ ಜೆಂಡರ್ ಮಸೂದೆ : ಸಂಸತ್ತಿನಲ್ಲಿರುವ ಟ್ರಾನ್ಸ್ ಜೆಂಡರ್ ಮಸೂದೆಯನ್ನು ಶೀಘ್ರದಲ್ಲೇ ವಾಪಸ್ ಪಡೆಯಲಾಗುವುದು.
* ಮಹಿಳಾ ಮೀಸಲಾತಿ: ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ. 33 ಮೀಸಲಾತಿ ನೀಡಲಾಗುವುದು.ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಪ್ರತ್ಯೇಕ ತನಿಖಾ ಸಂಸ್ಥೆ ರೂಪಿಸಲಾಗುವುದು.
* ಡಿಜಿಟಲ್ ಹಕ್ಕು: ಎಲ್ಲರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ನೀಡಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹರಡುವ ಮತ್ತು ಪ್ರಚೋದಿತ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.