ಜಮ್ಮು: ಹಲವು ದಾಖಲೆಗಳನ್ನು ನೋಂದಣಿ ಮಾಡುವ ಅಧಿಕಾರವನ್ನು ಕಸಿದುಕೊಂಡು ಕಂದಾಯ ಇಲಾಖೆಗೆ ನೀಡಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಜಮ್ಮುವಿನ ಹಲವೆಡೆ ವಕೀಲರು ಶನಿವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಇದರಿಂದಾಗಿ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾದವು. ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ ವಕೀಲರ ಸಂಘದ ಜಮ್ಮು ವಿಭಾಗ ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿತ್ತು. ಅಧಿಕಾರ ಮೊಟಕಿನ ಜತೆಗೆ ಜಾನಿಪುರದಿಂದ ನಗರದ ಹೊರವಲಯಕ್ಕೆ ಹೈಕೋರ್ಟ್ ಸ್ಥಳಾಂತರಿಸುವುದನ್ನೂ ವಿರೋಧಿಸಿ ಮುಷ್ಕರ ಆರಂಭಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶವಾದಜಮ್ಮು ಮತ್ತು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಜಿ.ಸಿ.ಮುರ್ಮು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಮುಷ್ಕರ ಪ್ರಮುಖ ಸವಾಲಾಗಿದೆ.