ಬೆಂಗಳೂರು: ಚುನಾವಣಾ ನೀತಿಸಂಹಿತೆ ಘೋಷಣೆಯಾದ ಬಳಿಕ ಬಿಬಿಎಂಪಿಯು ನಗರದ 8 ವಲಯಗಳಲ್ಲಿ ಬುಧವಾರ ಸಂಜೆವರೆಗೆ ಸುಮಾರು 5,000 ಅನಧಿಕೃತ ಬ್ಯಾನರ್ ಮತ್ತು ಬಂಟಿಂಗ್ ತೆರವುಗೊಳಿಸಿದೆ.
ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದ ಅನಧಿಕೃತ ಜಾಹೀರಾತು ಫಲಕಗಳ ತೆರವಿಗಾಗಿಯೇ ಸಹಾಯಕ ಎಂಜಿನಿಯರ್ಗಳ ನೇತೃತ್ವದಲ್ಲಿ ವಾರ್ಡ್
ವಾರು ತಂಡಗಳನ್ನು ರಚಿಸಲಾಗಿದೆ.
ಬಿಬಿಎಂಪಿ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್, ‘ಎಲ್ಲ ಅನಧಿಕೃತ ಬ್ಯಾನರ್ಗಳನ್ನು ತೆರವುಗೊಳಿಸಲು ಮಂಗಳವಾರ ರಾತ್ರಿ ಬಿಬಿಎಂಪಿಯ ಸುಮಾರು 500 ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಗುರುವಾರ ಸಂಜೆಯೊಳಗೆ ಇಡೀ ನಗರ ಅನಧಿಕೃತ ಜಾಹೀ
ರಾತು ಮತ್ತು ಬ್ಯಾನರ್ಗಳಿಂದ ಮುಕ್ತವಾಗಲಿದೆ’ ಎಂದರು.
ಸ್ಥಳೀಯ ಆಡಳಿತದ ಲಿಖಿತ ಅನುಮತಿ ಇಲ್ಲದೇ, ಜಾಹೀರಾತು ಫಲಕ, ಹೋರ್ಡಿಂಗ್ಸ್, ಬ್ಯಾನರ್ ಅಳವಡಿಸುವುದು ಶಿಕ್ಷಾರ್ಹ ಅಪರಾಧ. ₹1,000 ದಂಡ ಅಥವಾ 6 ತಿಂಗಳ ಸೆರೆವಾಸ ಅಥವಾ ಇವೆರಡನ್ನೂ ಅನುಭವಿಸಬೇಕಾಗುತ್ತದೆ.
‘ಕಾಯ್ದೆ ಉಲ್ಲಂಘಿಸುತ್ತಿರುವ ಬಗ್ಗೆ ಪ್ರಕರಣ ದಾಖಲಿಸಲು ಮುಂದಾದರೆ ಎಫ್ಐರ್ ದಾಖಲಿಸಲು ಪೊಲೀಸರು ನಿರಾಕರಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
‘ಈ ರೀತಿ ಪ್ರಕರಣ ದಾಖಲಿಸಿದರೆ ತಮ್ಮ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಖ್ಯೆ ಹೆಚ್ಚುತ್ತವೆ. ಪ್ರಕರಣ ಸಂಖ್ಯೆ ಹೆಚ್ಚಿದರೆ ಠಾಣೆಗೆ ಕೆಟ್ಟ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಕೆಲವು ಪ್ರಕರಣಗಳು ದಾಖಲಾಗುತ್ತಿದ್ದರೂ ಅದು ಚುನಾವಣಾ ನೀತಿ ಸಂಹಿತೆ ಕಾರಣಕ್ಕಷ್ಟೇ’ ಎಂದು ದೂರುತ್ತಾರೆ ಅಧಿಕಾರಿಗಳು.
12 ಗಂಟೆ ಗಡುವು: ‘ಎಲ್ಲ ರಾಜಕೀಯ ಪಕ್ಷಗಳು ತಮ್ಮ ಬ್ಯಾನರ್ಗಳು, ಹೋರ್ಡಿಂಗ್ಸ್, ಬಂಟಿಂಗ್ಸ್ ಹಾಗೂ ಪೋಸ್ಟರ್ಗಳನ್ನು ತಮ್ಮದೇ ವೆಚ್ಚದಲ್ಲಿ 12 ಗಂಟೆಗಳ ಒಳಗೆ ತೆರವುಗೊಳಿಸಬೇಕು’ ಎಂದು ಎನ್.ಮಂಜುನಾಥ್ ಪ್ರಸಾದ್ ಗಡುವು ನೀಡಿದ್ದಾರೆ.