ನವದೆಹಲಿ: ‘ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಲು ಭಾರತಕ್ಕೆ ಹಕ್ಕಿದೆ’ ಭೂ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಚೀನಾ ಜತೆಗಿನ ಗಡಿಯಲ್ಲಿ ಸೇನೆಯ ಹೋರಾಟ ಸಾಮರ್ಥ್ಯ ಹೆಚ್ಚಳ ಮಾಡಲಾಗುವುದು. ಇದರಿಂದಾಗಿ ಯಾವುದೇ ರೀತಿಯ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ಧವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ನರವಣೆ ಅವರಿಗೆ ಮಂಗಳವಾರ ಜ. ಬಿಪಿನ್ ರಾವತ್ ಅವರು ಅಧಿಕಾರ ಹಸ್ತಾಂತರಿಸಿದರು.
ನರವಣೆ ಅವರು 37 ವರ್ಷಗಳ ಸೇವೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಶಾಂತಿ ಸ್ಥಾಪನೆ ಮತ್ತು ಸಿಬ್ಬಂದಿ ನೇಮಕಾತಿಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ ಬೆಟಾಲಿಯನ್ನ ಕಮಾಂಡರ್ ಆಗಿ, ಶ್ರೀಲಂಕಾದ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಪ್ರತಿಷ್ಠಿತ ‘ಸೇನಾ ಪದಕ’, ‘ವಿಶಿಷ್ಟ ಸೇವಾ ಪದಕ’, ‘ಅತಿ ವಿಶಿಷ್ಟ ಸೇವಾ ಪದಕ’ಗಳು ದೊರೆತಿವೆ.
ಸೇನೆಯ ನೂತನ ಸಾರಥಿಗೆ ಶುಭ ಕೋರಿದ ಬಿಪಿನ್ ರಾವತ್, ‘ದೇಶದ ಭದ್ರತಾ ಸವಾಲುಗಳನ್ನು ಎದುರಿಸಲು ಸೇನೆ ಸಿದ್ಧವಾಗಿದೆಯೇ?’ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಮನೋಜ್ ಮುಕುಂದ್ ನರವಣೆ, ’ಹೌದು, ನಾವು ಸಕಲ ರೀತಿಯಲ್ಲೂ ಸಜ್ಜಾಗಿದ್ದೇವೆ‘ ಎಂದು ಹೇಳಿದರು.