ನವದೆಹಲಿ: ಕೋವಿಡ್–19 ಪರಿಣಾಮ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಯಲ್ಲಿ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಸರಕು ಸಾಗಣೆ ಸೇವೆ ಆರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.
ಮಾ. 22ರಿಂದ ಪ್ರಯಾಣಿಕ ರೈಲುಗಳ ಸಂಚಾರ ಸ್ಥಗಿತಗೊಳಿಸಿದ್ದ ರೈಲ್ವೆ, ಸರಕು ಸಾಗಣೆ ಸೇವೆಯನ್ನೂ ಬಂದ್ ಮಾಡಿತ್ತು. ಇದರಿಂದ ನಿತ್ಯ ಬಳಕೆ ಪದಾರ್ಥಗಳಾದ ತರಕಾರಿ, ಹೈನು ಉತ್ಪನ್ನಗಳು, ಮೀನು ಮತ್ತಿತರ ವಸ್ತುಗಳ ಸಾಗಾಟವೂ ನಿಂತಿದ್ದರಿಂದ ತೊಂದರೆಯಾಗಿದೆ.
‘ನವದೆಹಲಿಯಿಂದ ಗುವಾಹಟಿ, ಮುಂಬೈ, ಕಲ್ಯಾಣ, ಹೌರಾ, ಜೈಪುರ ಹಾಗೂ ಮೋಗಾ–ಛಂಗ್ಸಾರಿ ಮಾರ್ಗಗಳಲ್ಲಿ ಶೀಘ್ರವೇ ಸರಕು ಸಾಗಣೆಗೆ ರೈಲುಗಳ ಓಡಾಟವನ್ನು ಆರಂಭಿಸಲಾಗುವುದು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
‘ಈಗ ಪ್ರಯಾಣಿಕ ರೈಲುಗಳ ಓಡಾಟ ಇಲ್ಲ. ಹೀಗಾಗಿ ದೇಶದ ವಿವಿಧ ಸ್ಥಳಗಳಿಗೆ ಔಷಧಿ, ವೈದ್ಯಕೀಯ ಉಪಕರಣಗಳು, ಆಹಾರ ಪದಾರ್ಥಗಳನ್ನು ತ್ವರಿತವಾಗಿ ಸಾಗಿಸಬಹುದು’ ಎಂದೂ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.