ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀಸ್‌ನಿಂದ ಮರಳಿದ ಭಾರತೀಯರು

Last Updated 24 ಮಾರ್ಚ್ 2019, 16:50 IST
ಅಕ್ಷರ ಗಾತ್ರ

ಮುಂಬೈ:ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಗ್ರೀಸ್‌ ಜೈಲಿನಲ್ಲಿ 14 ತಿಂಗಳವರಿಗೆ ಇದ್ದ ಭಾರತದ ಐವರು ಸರಕು ಹಡಗಿನ ಸಿಬ್ಬಂದಿ ಭಾನುವಾರ ಮುಂಬೈಗೆ ಬಂದರು. ಈ ಐವರಲ್ಲಿ ಬೆಂಗಳೂರಿನವರೊಬ್ಬರೂ ಸೇರಿದ್ದಾರೆ.

‘ಎಂವಿ ಆಂಡ್ರೋಮಿಡಾ’ ಎಂಬ ಹೆಸರಿನ ಸರಕು ಹಡಗಿನಲ್ಲಿ ತೆರಳುತ್ತಿದ್ದ ವೇಳೆ 2018ರ ಜನವರಿ 9 ರಂದು ಗ್ರೀಕ್‌ನ ಕರಾವಳಿ ಭದ್ರತಾ ಪಡೆ ಈ ಐವರನ್ನು ಬಂಧಿಸಿತ್ತು.

ಟರ್ಕಿಯಿಂದ ಡಿಜಿಬೌಟಿ ಕಡೆಗೆ ಹೊರಟಿದ್ದ ಈ ಹಡಗಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ದುರಸ್ತಿಗಾಗಿ 2018ರ ಜನವರಿ 6 ರಂದು ಗ್ರೀಕ್‌ ಕರಾವಳಿಯತ್ತ ತೆರಳುತ್ತಿದ್ದಂತೆ ಅಲ್ಲಿನ ಭದ್ರತಾ ಸಿಬ್ಬಂದಿ ಇದನ್ನು ವಶಕ್ಕೆ ಪಡೆದಿದ್ದರು. ಈ ಹಡಗಿನಲ್ಲಿ ಪಟಾಕಿಗಳಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸಾಗಿಸಲಾಗುತ್ತಿತ್ತು.

ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಜೈಲಿಗೆ ಹಾಕಲಾಗಿತ್ತು. ಈಗ ಅವರನ್ನು ಮುಂಬೈಗೆ ಕಳುಹಿಸಲಾಗಿದೆ.

ಹಡಗಿನ ಸಿಬ್ಬಂದಿಯಾಗಿದ್ದ ಹಾಗೂ ಜೈಲಿಗೆ ಹೋಗಿದ್ದಬೆಂಗಳೂರಿನ ಗಗನ್‌ ದೀಪ್‌ ಅವರು ‘ಗ್ರೀಸ್‌ ಜೈಲನ್ನು 1953ರಲ್ಲಿ ನಿರ್ಮಿಸಲಾಗಿದೆ. ಈ ಜೈಲಿನಲ್ಲಿ ಇದ್ದ ಮೊದಲ ಭಾರತೀಯರು ನಾವೇ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಈ ಜೈಲಿನಲ್ಲಿದ್ದ ಪಾಕಿಸ್ತಾನದ ಕೈದಿಗಳು ನಮಗೆ ಭಾವನಾತ್ಮಕ ಬೆಂಬಲ ನೀಡಿದರು’ ಎಂದು ಹೇಳಿದರು.

‘ಕಳೆದ 23 ತಿಂಗಳಿನಿಂದ ನಮ್ಮ ಹಡಗು ಕಂಪನಿಯಿಂದ ವೇತನ ಸಹ ಬಂದಿಲ್ಲ’ ಎಂದೂ ತಿಳಿಸಿದರು.

‘ನಮ್ಮ ಹಾಗೂ ಪಾಕಿಸ್ತಾನದ ನಡುವೆ ಎಷ್ಟೇ ದ್ವೇಷವಿದ್ದರೂ ಬೇರೆ ದೇಶದಲ್ಲಿ ಒಬ್ಬರನ್ನೊಬ್ಬರು ಪ್ರೀತಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಜೈಲಿನಲ್ಲಿ ನಮಗೆ ಪಾಕಿಸ್ತಾನದ ಕೈದಿಗಳು ಬಹಳಷ್ಟು ಸಹಾಯ ಮಾಡಿದ್ದಾರೆ’ ಎಂದು ಹಡಗಿನ ಸಿಬ್ಬಂದಿ, ಪಂಜಾಬ್‌ನ ಗುರದಾಸಪುರದ ಭೂಪೇಂದ್ರ ಸಿಂಗ್‌ ಹೇಳಿದರು.

ಇವರೊಟ್ಟಿಗೆ ರೋಹ್ಟಸ್‌ ಕುಮಾರ್‌, ಜೈದೀಪ್‌ ಠಾಕೂರ್‌ ಮತ್ತು ಸತೀಶ್‌ ಪಾಟೀಲ್‌ ಎಂಬ ಸಿಬ್ಬಂದಿಯೂ ಇದ್ದರು.

ಬಿಡುಗಡೆಯಾಗಿರುವ ಸಿಬ್ಬಂದಿ ಸೋಮವಾರ ಕೇಂದ್ರದ ಬಂದರು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT