ನವದೆಹಲಿ: ಚೀನಾ ಗಡಿಯಲ್ಲಿ ಭಾರತೀಯ ಸೇನಾ ಪಡೆ ಸದಾ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ತಿಳಿಸಿದ್ದಾರೆ.
ಚೀನಾ ಮತ್ತು ಭಾರತೀಯ ಪಡೆಗಳ ಅಕ್ರಮಣಕಾರಿ ನಡವಳಿಕೆಗಳಿಂದ ಲಡಾಕ್ ಮತ್ತು ಸಿಕ್ಕಿಂ ಉತ್ತರ ವಲಯದಲ್ಲಿ ಇತ್ತೀಚೆಗೆ ಘರ್ಷಣೆಗಳು ನಡೆದಿವೆ. ಇದರಿಂದ, ಉಭಯ ದೇಶಗಳ ಯೋಧರು ಗಾಯಗೊಂಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಮಾತುಕತೆ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿದೆ ಎಂದು ಗುರುವಾರ ತಿಳಿಸಿದ್ದಾರೆ.
ಈ ಘಟನೆಗಳಿಗೂ ಜಾಗತಿಕವಾದ ಅಥವಾ ಸ್ಥಳೀಯಮಟ್ಟದ ವಿಷಯಗಳಿಗೂ ಸಂಬಂಧವಿಲ್ಲ. ವುಹಾನ್ ಮತ್ತು ಮಲ್ಲಾಪುರಂ ಶೃಂಗಸಭೆಯ ಬಳಿಕ ಪ್ರಧಾನಿ ಅವರು ನೀಡಿದ ನಿರ್ದೇಶನದಂತೆ ಇಂತಹ ಘರ್ಷಣೆಗಳನ್ನು ಪರಸ್ಪರ ಮಾತುಕತೆ ಮೂಲಕ ಇತ್ಯರ್ಥಗೊಳಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಭಾರತೀಯ ಪಡೆಗಳು ಗಡಿ ಪ್ರದೇಶದಲ್ಲಿ ಸದಾ ಶಾಂತಿ ಕಾಪಾಡಲು ಬದ್ಧವಾಗಿವೆ ಎಂದು ಹೇಳಿದ್ದಾರೆ.