ನವದೆಹಲಿ: ದೇಶದ ವಿವಿಧ ಏಳು ವಿಮಾನ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ತಿರುವನಂತಪುರ, ಮಂಗಳೂರು, ಮದುರೆ, ರುಪ್ಸಿ, ಜೈಪುರ, ಅಮೃತಸರ ಮತ್ತು ಇಂಫಾಲ್ ವಿಮಾನ ನಿಲ್ದಾಣಗಳಲ್ಲಿ ₹497 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.
ತಿರುನಂತಪುರ, ಕೋಲ್ಕತ್ತ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ₹ 132.15 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಇದೇ ವೇಳೆ ಸಚಿವರು ಉದ್ಘಾಟಿಸಿದರು.
‘ವಿಮಾನಯಾನ ಕ್ಷೇತ್ರವನ್ನು ವಿಸ್ತರಿಸುವ ದೃಷ್ಟಿಯಿಂದ ಹಲವೆಡೆ ಈ ಯೋಜನೆಯನ್ನು ನಾವು ಕೈಗೆತ್ತಿಕೊಂಡಿದ್ದೇವೆ.
ದೇಶದ ಎಲ್ಲಾ ಪ್ರದೇಶವನ್ನೂ ಅಭಿವೃದ್ಧಿಪಡಿಸುವ ತನಕ ನಾವು ನಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆಂದು ಹೇಳಲು ಆಗುವುದಿಲ್ಲ’ ಎಂದು ಸುರೇಶ್ಪ್ರಭು ಅಭಿಪ್ರಾಯಪಟ್ಟರು.