ಹೈದರಾಬಾದ್: ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು (ಕೆಎಲ್ಐಪಿ) ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಶುಕ್ರವಾರ ಉದ್ಘಾಟಿಸಿದರು.
ವಿಶ್ವದ ಅತಿದೊಡ್ಡ ಬಹು ಹಂತದ ಏತ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಈ ಯೋಜನೆ ಪಾತ್ರವಾಗಿದೆ.
ಜಯಶಂಕರ– ಭೂಪಾಲಪಲ್ಲಿ ಜಿಲ್ಲೆಯ ಮೇಡಿಗಡ್ಡ ಗ್ರಾಮದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆಲಂಗಾಣ–ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ತೆಲಂಗಾಣ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಸಾಕ್ಷಿಯಾದರು.
ಮಹಾರಾಷ್ಟ್ರದಲ್ಲಿ ಹುಟ್ಟಿ ತೆಲಂ ಗಾಣ ಮೂಲಕ ಹರಿದು, ಆಂಧ್ರಪ್ರದೇಶದಲ್ಲಿ ಸಮುದ್ರ ಸೇರುವ ಗೋದಾವರಿ ನದಿ ನೀರನ್ನು ಏತ ನೀರಾವರಿಗೆ ಬಳಸಿಕೊಳ್ಳುವ ಸಲುವಾಗಿ ₹ 80 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಈ ಯೋಜನೆ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಅನುಕೂಲವಾಗುವಂತೆ 45 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ‘ಮಿಷನ್ ಭಗೀರಥ’ ಯೋಜನೆಯಡಿ 40 ಟಿಎಂಸಿ ಅಡಿ ನೀರನ್ನು ಕುಡಿಯುವ ನೀರು ಪೂರೈಕೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಜಲವಿದ್ಯುತ್ ಉತ್ಪಾದನೆಗೂ ಯೋಜನೆ ಸಹಕಾರಿಯಾಗಿದೆ. ಉದ್ಘಾಟನೆ ವೇಳೆಯಲ್ಲಿ ನಡೆದ ‘ಜಲ ಸಂಕಲ್ಪ ಮಹೋತ್ಸವ ಯಜ್ಞಂ’ನಲ್ಲಿ ಚಂದ್ರಶೇಖರರಾವ್, ಪತ್ನಿ ಶೋಭಾ ಪಾಲ್ಗೊಂಡಿದ್ದರು. ಶೃಂಗೇರಿಯ ಶಾರದಾ ಪೀಠದ ವೇದಪಂಡಿತರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.