ಚೆನ್ನೈ: ಆಂಧ್ರ ಪ್ರದೇಶದ ವರದೈಪಾಲಂ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಆಧ್ಯಾತ್ಮ ಮತ್ತು ವೇದಾಂತ ಬೋಧಿಸುವ ಮತ್ತು ತರಬೇತಿ ಕೇಂದ್ರಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಅಕ್ಟೋಬರ್ 16 ಬುಧವಾರದಿಂದ ಈ ದಾಳಿ ಆರಂಭವಾಗಿದ್ದು ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ವರದೈಪಾಲಂನಲ್ಲಿರುವ 40 ಪ್ರಮುಖ ಪ್ರದೇಶಗಳಲ್ಲಿ ದಾಳಿ ಮುಂದುವರಿದಿದೆ.
ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್ ಮತ್ತು ಅವರ ಮಗ ಕೃಷ್ಣ ಅವರ ಮಾಲೀಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ₹43.9 ಕೋಟಿ ನಗದು ಹಾಗೂ ಡಾಲರ್ ರೂಪದಲ್ಲಿದ್ದ 18 ಕೋಟಿ ಮತ್ತು ₹26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರದಿಂದ ಈ ದಾಳಿ ಆರಂಭವಾಗಿತ್ತು.
ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಆಶ್ರಮಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಈ ದಾಳಿ ನಡೆಸಲಾಗಿತ್ತು.
ಈ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳ ಅನ್ವಯ ಸುಮಾರು ₹500 ಕೋಟಿ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಕೆಲವು ಉದ್ಯಮಗಳಲ್ಲಿ ಅಪಾರ ಹಣವನ್ನು ಕೃಷ್ಣ ಹೂಡಿಕೆ ಮಾಡಿದ್ದು, ಇವುಗಳ ಮೂಲಕವೇ ತೆರಿಗೆ ವಂಚಿಸಲಾಗಿದೆ ಎನ್ನುವ ಅನುಮಾನ ಮೂಡಿದೆ. ತಂದೆಯ ಆಶ್ರಮದ ಹಣವನ್ನು ತನ್ನ ಕಂಪನಿಗಳಿಗೆ ಈತ ವರ್ಗಾಯಿಸಿದ್ದ.
‘ಕಲ್ಕಿ ಭಗವಾನ್ ಮಾಲೀಕತ್ವ ಹೊಂದಿರುವ ಆಶ್ರಮದಿಂದ ಅಪಾರ ಪ್ರಮಾಣದಲ್ಲಿ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಆಶ್ರಮ ಮತ್ತು ಇತರ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್ಗೆ ಸೇರಿದ ಆಶ್ರಮಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ವಿದೇಶಿ ಕರೆನ್ಸಿಗಳು ಸೇರಿದಂತೆ 33 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ.