ಶ್ರೀನಗರ: ಕಾಶ್ಮೀರಿಗಳು ಜೀವನ ಹಾಗೂ ಸಾವಿನ ವಿರುದ್ಧ ಹೋರಾಡುತ್ತಿದ್ದಾರೆ. ಸಂವಿಧಾನದ 370 ಹಾಗೂ 35ಎ ವಿಧಿ ರದ್ದು ಕುರಿತು ಈಗ ಮಾತನಾಡುವುದಿಲ್ಲ ಎಂದು ಕಳೆದ 8 ತಿಂಗಳಿಂದಲೂ ಗೃಹ ಬಂಧನದಲ್ಲಿದ್ದ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಒಮರ್ ಅವರ ಗೃಹ ಬಂಧನದ ಅವಧಿಯನ್ನು ಕಳೆದ ಫೆಬ್ರುವರಿಯಲ್ಲಿ ವಿಸ್ತರಿಸಲಾಗಿತ್ತು. ಇದೀಗ ಗೃಹ ಬಂಧನದ ಆದೇಶವನ್ನು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರ ರದ್ದುಪಡಿಸಿದೆ. ಆದೇಶ ರದ್ದುಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಕಾಶ್ಮೀರಿಗಳು ಜೀವನ ಹಾಗೂ ಸಾವಿನ ವಿರುದ್ಧ ಹೋರಾಡುತ್ತಿದ್ದಾರೆ. ಸಂವಿಧಾನದ 370 ಹಾಗೂ 35ಎ ವಿಧಿ ರದ್ದು ಕುರಿತು ಈಗ ಮಾತನಾಡುವುದಿಲ್ಲ. ಸದ್ಯ ನಾವು ಮಾರಣಾಂತಿಕ ಕೋವಿಡ್–19 ವಿರುದ್ಧ ಬೃಹತ್ ಹೋರಾಟ ನಡೆಸಬೇಕಿದೆ. ಅದಕ್ಕಾಗಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಆದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದರು. ಕಣಿವೆಯಲ್ಲಿ ಉದ್ಯಮ ವಲಯ ನೆಲಕಚ್ಚಿದ್ದು, ಅಂಗಡಿ ಹಾಗೂ ಹೋಟೆಲ್ ಮಾಲೀಕರು, ಇತರ ಸಂಸ್ಥೆಗಳು ನಷ್ಟ ಅನುಭವಿಸಿದವು. ನನ್ನನ್ನು ಒಂದು ಕಡೆ ಬಂಧನದಲ್ಲಿ ಇಡಲಾಗಿತ್ತು. ಆದರೆ ಕಾಶ್ಮೀರ ಕಣಿವೆಯಾದ್ಯಂತ ಜನರು ತುಂಬಾ ನಷ್ಟ ಅನುಭವಿಸಿದ್ದು, ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈಗ ಗೃಹಬಂಧನದಲ್ಲಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸೇರಿದಂತೆ ಇತರ ಎಲ್ಲ ರಾಜಕೀಯ ನಾಯಕರನ್ನು ಬಡುಗಡೆ ಮಾಡಬೇಕು. ಸಂವಹನದ ಅಂತರವನ್ನು ಸರ್ಕಾರ ಕೊನೆಗಾಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯಾಷನಲ್ ಕಾನ್ಪರೆನ್ಸ್ನ ಅಧ್ಯಕ್ಷ ಹಾಗೂ ಸಂಸದ ಫಾರೂಕ್ ಅಬ್ದುಲ್ಲಾ ಅವರನ್ನು ಮಾರ್ಚ್ 13ರಂದು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಗೃಹಬಂಧನವು ಮುಂದುವರಿದಿದೆ.
ಒಮರ್ ಅವರ ಗೃಹಬಂಧನದ ಕುರಿತು ವಾರದ ಒಳಗಾಗಿ ಮಾಹಿತಿ ನೀಡುವಂತೆ ಕಳೆದ ವಾರ ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಒಮರ್ ಅವರನ್ನು ಬಿಡುಗಡೆ ಮಾಡಿದೆ.
ಒಮರ್ ಅವರ ಬಿಡುಗಡೆಯನ್ನು ಜಮ್ಮು ಮತ್ತು ಕಾಶ್ಮೀರದ ಹಲವು ನಾಯಕರು ಸ್ವಾಗತಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.