ಶ್ರೀನಗರ:ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು ಮಂಗಳವಾರ ಬಂದ್ಗೆ ಕರೆ ನೀಡಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ನಗರದ ಹಲವು ಪ್ರದೇಶಗಳಲ್ಲಿಮುಖ್ಯ ಮಾರುಕಟ್ಟೆ ಮತ್ತು ಇತರ ವ್ಯಾಪಾರ– ವಹಿವಾಟು ಬಂದ್ ಆಗಿದ್ದವು.
ಸಾರ್ವಜನಿಕ ಸಾರಿಗೆ ವಿರಳವಾಗಿದ್ದು, ಕಾರುಗಳು ಮತ್ತು ಆಟೊರಿಕ್ಷಾ ಎಂದಿನಂತೆ ರಸ್ತೆಗಿಳಿದವು.
ಶಾಲೆಗಳಿಗೆ ಮಂಗಳವಾರದಿಂದ (ಡಿ.10)ರಿಂದ ಚಳಿಗಾಲದ ರಜೆ ಘೋಷಿಸಲಾಗಿದೆ.
ಸೈಯದ್ ಅಲಿ ಶಾ ಗಿಲಾನಿ ನೇತೃತ್ವದ ಹುರಿಯತ್ ಸಂಘಟನೆ ಬಂದ್ಗೆ ಕರೆ ನೀಡಿತ್ತು. ಅಲ್ಲದೇ,ಮಾನವ ಹಕ್ಕುಗಳ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲು ಸಾರ್ವಜನಿಕರಲ್ಲಿ ಕೇಳಿಕೊಂಡಿತ್ತು.
ಎಸ್ಎಂಎಸ್ ಸೇವೆ ಪುನರಾರಂಭ
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಗಿತಗೊಳಿಸಿದ್ದ ಎಸ್ಎಂಎಸ್ ಸೇವೆಯನ್ನು ಮಂಗಳವಾರದಿಂದ ಪುನರಾರಂಭಿಸಲಾಗಿದೆ.
ಕಾಶ್ಮೀರದಲ್ಲಿ ಕಳೆದ ಅಕ್ಟೋಬರ್ 14ರಂದು ಪೋಸ್ಟ್ಪೇಯ್ಡ್ ಸಂಪರ್ಕವನ್ನು ಕಲ್ಪಿಸಿದ ಕೆಲವೇ ಗಂಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಎಂಎಸ್ ಸೇವೆ ಸ್ಥಗಿತಗೊಳಿಸಲಾಗಿತ್ತು.
‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪುನರ್ಸ್ಥಾಪನೆ ಅಗತ್ಯ’
ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪುನರ್ಸ್ಥಾಪಿಸುವ ಅಗತ್ಯವಿದೆ ಎಂದು ಐರೋಪ್ಯ ಒಕ್ಕೂಟದಲ್ಲಿನ ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ಉಗೊ ಅಸ್ತೂಟೊ ಮಂಗಳವಾರ ಹೇಳಿದ್ದಾರೆ.
‘ಕಾಶ್ಮೀರದ ಪರಿಸ್ಥಿತಿಯ ಕುರಿತು ಐರೋಪ್ಯ ಒಕ್ಕೂಟ ಕಳವಳ ಹೊಂದಿದ್ದು, ಅಲ್ಲಿ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಮರುಸ್ಥಾಪಿಸುವ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಮಸೂದೆ ಕುರಿತು ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ತತ್ವವನ್ನು ಭಾರತ ಎತ್ತಿ ಹಿಡಿಯಲಿದೆ ಎಂಬ ಭರವಸೆ ಇದೆ ಎಂದು ತಿಳಿಸಿದರು.