ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಶುಕ್ರವಾರ ಉಗ್ರರ ವಿರುದ್ಧ ನಡೆದ ಎನ್ಕೌಂಟರ್ನಲ್ಲಿ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವಿನ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕನೂ ಮೃತಪಟ್ಟಿದ್ದಾನೆ. ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಶಂಕಿಸಲಾಗಿದೆ.
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂಡ್ವಾರಾ ಬಳಿಯ ಬಾಬಾಗುಂದ್ ಪ್ರದೇಶದ ಮನೆಯೊಂದರಲ್ಲಿ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಪಡೆದು ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು.
ಉಗ್ರರ ಅಡಗಿದ್ದ ಮನೆಯನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡು ಹಾರಿಸಲು ಆರಂಭಿಸಿದರು. ಹಲವು ತಾಸುಗಳ ಗುಂಡಿನ ಚಕಮಕಿ ನಂತರ ಉಗ್ರರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಉಗ್ರರು ಸತ್ತಿರಬಹುದು ಎಂದು ಶಂಕಿಸಿದ ಭದ್ರತಾ ಸಿಬ್ಬಂದಿ ಉಗ್ರರು ಅಡಗಿದ್ದ ಮನೆಯೊಳಗೆ ಹೊಕ್ಕರು.
ನೆಲದ ಮೇಲೆ ಸತ್ತಂತೆ ಬಿದ್ದಿದ್ದ ಇಬ್ಬರು ಉಗ್ರರ ಪೈಕಿ ಒಬ್ಬ ಏಕಾಏಕಿ ಎದ್ದು ನಿಂತು ಭದ್ರತಾ ಸಿಬ್ಬಂದಿ ಕಡೆಗೆ ಗುಂಡಿನ ಮಳೆಗರೆದ. 9 ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡರು.