ನವದೆಹಲಿ: ಮಧ್ಯ ಪ್ರದೇಶ ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕನಾಗಿ ಹಿರಿಯ ನಾಯಕ ಕಮಲನಾಥ್ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.
ಕಮಲನಾಥ್ ಅವರು ಶುಕ್ರವಾರ ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ 18 ಸುದ್ದಿ ತಾಣ ವರದಿ ಮಾಡಿದೆ. ಮುಖ್ಯಮಂತ್ರಿ ಗಾದಿಗೆರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಕಮಲನಾಥ್ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಪ್ರಬಲ ಪೈಪೋಟಿ ಇತ್ತು.
ಕಮಲನಾಥ್ ಜತೆ ಸಜ್ಜನ್ ಸಿಂಗ್ ವರ್ಮಾ, ತುಳಸಿ ಸಿಲಾವತ್, ಕೆ.ಪಿ. ಸಿಂಗ್, ಬಾಲ ಬಚ್ಚನ್ ಸೇರಿದಂತೆ 12 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗಿದೆ.
230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶ ಬುಧವಾರ ಅಧಿಕೃತವಾಗಿ ಪ್ರಕಟವಾಗಿತ್ತು. ಬಹುಮತಕ್ಕೆ 116 ಸ್ಥಾನಗಳು ಬೇಕಿದ್ದು, ಕಾಂಗ್ರೆಸ್ 114 ಸ್ಥಾನ ಹೊಂದಿದೆ. ಸರ್ಕಾರ ರಚನೆಗೆ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಬಿಎಸ್ಪಿ ಈಗಾಗಲೇ ಘೋಷಿಸಿದೆ.
ಹಕ್ಕು ಮಂಡಿಸಿದ ಕಮಲನಾಥ್: ಕಮಲನಾಥ್ ಅವರು ಈಗಾಗಲೇ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.