ಬಿಹಾರ: ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯಾ ಕುಮಾರ್ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಎಡಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಎಡಪಕ್ಷಗಳು ಈ ತೀರ್ಮಾನ ಕೈಗೊಂಡಿದ್ದು, ಈ ನಿರ್ಧಾರ ಪ್ರಕಟಿಸಿದ ಒಂದು ದಿನದ ನಂತರ ಭಾನುವಾರ ಕನ್ನಯ್ಯಾ ಕುಮಾರ್ ಮಹಾ ಮೈತ್ರಿಯಿಂದ ಹೊರಬಂದಿದ್ದಾರೆ.
ಇದರೊಂದಿಗೆ ಕನ್ನಯ್ಯಾ ಕುಮಾರ್ ರಾಜಕೀಯ ರಂಗ ಪ್ರವೇಶ ಅಧಿಕೃತವಾದಂತಾಗಿದೆ. ನಿತೀಶ್ ಕುಮಾರ್ ಆಡಳಿತದ ವಿರುದ್ಧ ಒಟ್ಟಾಗಿರುವ ವಿರೋಧಪಕ್ಷಗಳ ಅಭ್ಯರ್ಥಿಯಾಗಿ ಕನ್ನಯ್ಯಾ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸೀಟು ಹಂಚಿಕೆ ವೇಳೆಸಿಪಿಐ ಮತ್ತು ಸಿಪಿಐ-ಎಂ ಪಕ್ಷಗಳಿಗೆ ಯಾವುದೇ ಸೀಟುಗಳನ್ನು ಹಂಚಿಕೆ ಮಾಡದೆ ಹೊರಗಿಟ್ಟಿದ್ದೇ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಮಹಾ ಮೈತ್ರಿಯಲ್ಲಿ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ , ಉಪೇಂದ್ರ ಖುಶ್ವಾ ಸೇರಿದಂತೆ ಐದು ಪಕ್ಷಗಳು ಸೇರಿವೆ. ಇಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಆಡಳಿತ ಪಕ್ಷವಾಗಿದ್ದು, ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ನಡೆಸುತ್ತಿದೆ.
ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿದ್ದು, ಶುಕ್ರವಾರ ಸೀಟು ಹಂಚಿಕೆ ಕುರಿತಂತೆ ಮಹಾ ಮೈತ್ರಿಯಲ್ಲಿರುವ ಪಕ್ಷಗಳ ಪಟ್ಟಿಯಲ್ಲಿ
ಆರ್ಜೆಡಿ 20, ಕಾಂಗ್ರೆಸ್ 9, ಉಪೇಂದ್ರ ಖುಶ್ವಾ ಪಕ್ಷ 5, ಇತರೆ ಎರಡು ಪಕ್ಷಗಳಿಗೆ 6 ಕ್ಷೇತ್ರಗಳನ್ನು ಹಂಚಲಾಗಿದೆ.ಆದರೆ, ಇಲ್ಲಿ ಸಿಪಿಐ ಮತ್ತು ಸಿಪಿಐ-ಎಂಗೆ ಯಾವುದೇ ಸೀಟನ್ನು ಹಂಚಿಕೆ ಮಾಡಲಿಲ್ಲ. ಆದರೆ, ಆರ್ಜೆಡಿ ಮಾತ್ರ ಒಂದು ಕ್ಷೇತ್ರವನ್ನು ಸಿಪಿಐ-ಎಂಗೆ ಬಿಟ್ಟುಕೊಡುವುದಾಗಿ ಹೇಳಿತ್ತು. ಆದರೆ, ಭಾನುವಾರದವರೆಗೆ ನಡೆದ ಬೆಳವಣಿಗೆಗಳಲ್ಲಿ ಸಿಪಿಐಗಾಗಲಿ ಅಥವಾ ಸಿಪಿಐ-ಎಂ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎನ್ನಲಾಗಿದೆ.
ಈಗ ಮಹಾ ಮೈತ್ರಿಯಲ್ಲಿಕನ್ನಯ್ಯಾ ಕುಮಾರ್ ಆಯ್ಕೆ ಮಾಡಿಕೊಂಡಿದ್ದ ಬೇಗುಸರಾಯ್ ಕ್ಷೇತ್ರದಿಂದ ಆರ್ ಜೆಡಿಯ ತೇಜಸ್ವಿ ಯಾದವ್ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಬೇಗುಸರಾಯ್ನಲ್ಲಿ ವಿರೋಧಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದ್ದು ಆಡಳಿತ ಪಕ್ಷವಾದ ಜೆಡಿಯು ಅಭ್ಯರ್ಥಿಗೆ ಲಾಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತೊಂದು ಮೂಲದ ಪ್ರಕಾರ ಬೇಗುಸರಾಯ್ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಅಧಿಕವಾಗಿದ್ದು, ಆರ್ಜೆಡಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲೂಬಹುದು.ಈ ಕ್ಷೇತ್ರದಲ್ಲಿ 2014ರಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಸೋಲುಕಂಡಿದ್ದ ತನ್ವೀರ್ ಹಸನ್ ಅವರು ಆರ್ಜೆಡಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.