ಲಾಹೋರ್ : ಮಾಜಿ ಕ್ರಿಕೆಟ್ ಆಟಗಾರ ಹಾಗೂ ಪಂಜಾಬ್ ಶಾಸಕ ನವಜೋತ್ ಸಿಂಗ್ ಸಿಧು ಅವರನ್ನು ಕರ್ತಾರ್ಪುರ ಕಾರಿಡಾರ್ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಪಾಕಿಸ್ತಾನ ಆಹ್ವಾನಿಸಿದೆ. ಈ ಮಾರ್ಗವು ನವೆಂಬರ್ 9ರಂದು ಭಕ್ತರಿಗೆ ಮುಕ್ತವಾಗಲಿದೆ.
ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನದ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಾರತೀಯರಿಗೆ ವೀಸಾ ಇಲ್ಲದಿದ್ದರೂ ಪ್ರವಾಸಕ್ಕೆ ಅನುಮತಿ ನೀಡಲು ಕಳೆದ ವಾರ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಒಪ್ಪಂದದ ಪ್ರಕಾರ ಪ್ರತಿದಿನ 5 ಸಾವಿರ ಭಕ್ತರು ಗುರುದ್ವಾರ ದರ್ಬಾರ್ ಸಾಹೀಬ್ಗೆ ಭೇಟಿ ನೀಡಬಹುದಾಗಿದೆ. ಇದು ಗುರುನಾನಕ್ ದೇವ್ ಅವರು ತಮ್ಮ ಕೊನೆಯ 18 ವರ್ಷಗಳ ಕಾಲ ಜೀವಿಸಿದ ಸ್ಥಳವಾಗಿದೆ.
ಪ್ರಧಾನಿ ಇಮ್ರಾನ್ ಖಾನ್ ಅವರ ಸೂಚನೆ ಮೇರೆಗೆ ಪಾಕಿಸ್ತಾನ ತೆಹ್ರೀಕ್ ಎ–ಇನ್ಸಾಪ್ (ಪಿಟಿಐ) ಸಂಸದ ಫೈಸಲ್ ಜಾವೇದ್ ಅವರು ಸಿಧು ಅವರನ್ನು ಸಂಪರ್ಕಿಸಿ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ದ ಎಕ್ಸ್ಪ್ರೆಸ್ ಟ್ರಿಬೂನ್ ವರದಿ ಮಾಡಿದೆ.
ಕಳೆದ ವರ್ಷದ ಆಗಸ್ಟ್ನಲ್ಲಿ ನಡೆದ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭದಲ್ಲಿ ಸಿಧು ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು.