ನವದೆಹಲಿ:ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಮಸೀದಿಗಳಲ್ಲಿ ಸಲ್ಲಿಸಲು ಕಾಶ್ಮೀರ ಕಣಿವೆಯ ಜನರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.
ಶುಕ್ರವಾರದಿಂದ ಕಾಶ್ಮೀರದ ಹಲವೆಡೆ ನಿರ್ಬಂಧ ಸಡಿಲಿಸಲಾಗಿತ್ತು. ಆದರೆ ಭಾನುವಾರ ಮಧ್ಯಾಹ್ನದಿಂದ ಮತ್ತೆ ನಿರ್ಬಂಧ ಹೇರಲಾಗಿದೆ. ಶ್ರೀನಗರದ ರಸ್ತೆಗಳಲ್ಲಿ ಭದ್ರತಾ ಸಿಬ್ಬಂದಿ ತಮ್ಮ ಗಸ್ತು ಹೆಚ್ಚಿಸಿದ್ದಾರೆ. ‘ನಾಗರಿಕರೆಲ್ಲರೂ ಮನೆಗಳಿಗೆ ಹಿಂತಿರುಗಿ. ಅಂಗಡಿಗಳ ಬಾಗಿಲು ಮುಚ್ಚಿ’ ಎಂದು ಆದೇಶಿಸುತ್ತಿದ್ದಾರೆ.
‘ಈವರೆಗೆ ಪರಿಸ್ಥಿತಿ ಶಾಂತವಾಗಿಯೇ ಇದೆ.ಸ್ಥಳೀಯ ಆಡಳಿತಗಳು ಅಲ್ಲಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಭದ್ರತಾ ಸಿಬ್ಬಂದಿ ಸಿದ್ಧವಾಗಿದ್ದಾರೆ. ಇದರ ಮಧ್ಯೆಯೇ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.
‘ಪ್ರಾರ್ಥನೆ ಸಲ್ಲಿಸುವುದು ಮುಖ್ಯ. ಆದರೆ ಅದೇ ಸಂದರ್ಭದಲ್ಲಿ ಯಾವುದೇ ರೀತಿಯ ಹಿಂಸಾಚಾರ ನಡೆಯದಂತೆ, ಸಾವು–ನೋವು ಸಂಭವಿಸದಂತೆ ಎಚ್ಚರವಹಿಸುವುದುಸರ್ಕಾರದ ಆದ್ಯ ಕರ್ತವ್ಯ’ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ.
‘ಈ ಎಲ್ಲಾ ನಿರ್ಬಂಧಗಳು ತಾತ್ಕಾಲಿಕವಾದುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮರಳಿದ ನಂತರ ಈ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತದೆ. ಸಾಧ್ಯವಾದಷ್ಟು ಬೇಗ ಸ್ಥಿರ ದೂರವಾಣಿ ಮತ್ತು ಮೊಬೈಲ್ ಸೇವೆಯನ್ನು ಪುನರಾರಂಭಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.