ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಐವರ ನ್ಯಾಯಮೂರ್ತಿಗಳ ಸಂವಿಧಾನ ಪೀಠ ರಚಿಸಿದೆ.
ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದಲ್ಲಿ ಈ ಪೀಠ ರಚಿಸಲಾಗಿದ್ದು, ಅಕ್ಟೋಬರ್ 1ರಿಂದ ವಿಚಾರಣೆ ಆರಂಭಿಸಲಿದೆ. ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತಿ ಈ ಪೀಠದಲ್ಲಿದ್ದಾರೆ.
370ನೇ ವಿಧಿ ರದ್ದುಪಡಿಸುವ ಕುರಿತಂತೆ ಇರುವ ಸಾಂವಿಧಾನಿಕ ಅವಕಾಶಗಳು ಮತ್ತು ರಾಷ್ಟ್ರಪತಿ ಆದೇಶಕ್ಕೆ ಸಂಬಂಧಿಸಿದಂತೆ ಪೀಠವು ಪರಿಶೀಲನೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಆಗಸ್ಟ್ 28ರಂದು ಈ ಅರ್ಜಿಗಳನ್ನು ಸಂವಿಧಾನಪೀಠಕ್ಕೆ ವರ್ಗಾಯಿಸಿತ್ತು. ನ್ಯಾಷನಲ್ ಕಾನ್ಫೆರೆನ್ಸ್ ಮುಖಂಡರು ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.