ಶ್ರೀನಗರ: ಕಾಶ್ಮೀರದಲ್ಲಿ ಈ ವರ್ಷದ ಮೊದಲ ಐದು ತಿಂಗಳಲ್ಲಿ 100ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ.23 ಮಂದಿ ವಿದೇಶಿಯರು ಬಲಿ ಆಗಿದ್ದಾರೆ.
ಆದರೆ, ಉಗ್ರರ ಸಂಘಟನೆಗಳಿಗೆ ಸೇರುತ್ತಿರುವ ಯುವಕರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಎಂಬುದುಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ನಿಯೋಜಿತವಾಗಿರುವ ಭದ್ರತಾ ಪಡೆಗಳಿಗೆ ಹೆಚ್ಚಿನ ಆತಂಕವನ್ನು ಮೂಡಿಸುತ್ತಿದೆ.
ಮೂಲಗಳ ಪ್ರಕಾರ, ಈ ವರ್ಷ ಮಾರ್ಚ್ ತಿಂಗಳ ನಂತರ ಸುಮಾರು 50 ಯುವಕರು ಉಗ್ರರ ತಂಡ ಸೇರಿದ್ದಾರೆ. ಈ ಪ್ರವೃತ್ತಿ ತಡೆಯಲು ಭದ್ರತಾ ಪಡೆಗಳು ಪರ್ಯಾಯ ಮಾರ್ಗ ಅರಸುತ್ತಿವೆ. ಉಗ್ರರ ಪಡೆ ಸೇರುವ ಯುವಜನರ ಕುಟುಂಬಗಳಲ್ಲಿ ಅರಿವು ಮೂಡಿಸುವುದು ಇದರಲ್ಲಿ ಸೇರಿದೆ.
2019ರಲ್ಲಿ ಮೇ 31ರವರೆಗೆ101 ಉಗ್ರರು ಹತರಾಗಿದ್ದು ಅವರಲ್ಲಿ 78 ಉಗ್ರರು ಭಾರತದವರು. ಅಲ್ ಕೈದಾ ಸಂಘಟನೆಯ ಘಟಕವಾಧ ಅನ್ಸರ್ ಘಾಜ್ವಾತ್ ಉಲ್ ಹಿಂದ್ನ ಮುಖ್ಯಸ್ಥ ಜಾಕಿರ್ ಮೂಸಾ ಕೂಡ ಹತರಲ್ಲಿ ಸೇರಿದ್ದಾನೆ.
ಆದರೆ, ಮೂಸಾ ಸಾವಿನ ನಂತರ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಿಂದ ಹೆಚ್ಚಿನ ಸದಸ್ಯರು ಅನ್ಸರ್ ಘಾಜ್ವಾತ್ ಉಲ್ ಹಿಂದ್ ಸಂಘಟನೆಯನ್ನು ಸೇರಿದ್ದಾರೆ. ಇವರಲ್ಲಿ ಹೆಚ್ಚಿನವರು ಹೋರಾಟಕ್ಕೆ ಸಜ್ಜಾಗಿರುವವರು ಅಥವಾ ಹೋರಾಟದ ಕಾರ್ಯತಂತ್ರ ರೂಪಿಸುವವರೇ ಆಗಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಯುವಜನರು ಹಾಗೂ ಅವರ ಪೋಷಕರಲ್ಲಿ ಇದರ ಪ್ರತಿಕೂಲ ಪರಿಣಾ ಮಗಳ ಕುರಿತಂತೆ ಅರಿವು ಮೂಡಿಸುವುದೂ ಸೇರಿ ಸಮಗ್ರವಾಗಿ ಉಗ್ರರ ವಿರೋಧಿ ನೀತಿಯನ್ನು ಪರಿಷ್ಕರಿಸು ವುದು ಅಗತ್ಯ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಾರೆ.
ಈ ಮಧ್ಯೆ ಉಗ್ರರ ಒಳನುಸುಳುವಿಕೆ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ಉಗ್ರರು ಕಾಶ್ಮೀರ ವಲಯದ ಪೂಂಛ್ ಮತ್ತು ರಾಜೌರಿ ಜಿಲ್ಲೆ ಭಾಗದಿಂದ ಹಾಗೂ ಕಾಶ್ಮೀರ ಕಣಿವೆಯಲ್ಲಿನ ಗಡಿ ನಿಯಂತ್ರಣ ರೇಖೆಯ ಭಾಗದಿಂದ ಒಳನುಸುಳುತ್ತಿದ್ದಾರೆ.
ಅಮರನಾಥ ಯಾತ್ರೆ ಈ ಮಾಸಾಂತ್ಯದಲ್ಲಿ ಆರಂಭವಾಗಲಿದೆ. ಹಾಗಾಗಿ, ಭದ್ರತೆಯನ್ನು ಹೆಚ್ಚಿಸಲಾಗಿದೆ.