ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದ ಆರೋಪಿಗೆ 14 ದಿನದ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಲಾಗಿದೆ.
ರಾಜಧಾನಿಯ ತಿಸ್ ಹಜಾರಿ ನ್ಯಾಯಾಲಯವು ಬುಧವಾರ ಆರೋಪಿ ಅನಿಲ್ ಕುಮಾರ್ ಶರ್ಮಾನನ್ನು ವಿಚಾರಣೆ ನಡೆಸಿತು. ಮಂಗಳವಾರ ಪೊಲೀಸರು ಈತನನ್ನು ಬಂಧಿಸಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮಧ್ಯಾಹ್ನ ಕಚೇರಿಯಿಂದ ಹೊರಬರುತ್ತಿದ್ದ ವೇಳೆ ಅನಿಲ್ ಶರ್ಮಾ ಈ ದುಷ್ಕೃತ್ಯ ಎಸಗಿದ್ದನು.
ಶರ್ಮಾ ದೂರು ದಾಖಲಿಸಲು ಕೇಜ್ರಿವಾಲ್ ಅವರ ಕಚೇರಿಗೆ ಹೋಗಿದ್ದನು. ದೂರಿನ ಪತ್ರ ನೀಡಿದ ನಂತರ ಪಾದ ಮುಟ್ಟುವಂತೆ ಮಾಡಿ ನಂತರ ಎದ್ದು ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದನು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 186, 353 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ), 332 (ಕರ್ತವ್ಯದ ವೇಳೆ ಸಾರ್ವಜನಿಕ ವ್ಯಕ್ತಿಯನ್ನು ಸ್ವಯಂಪ್ರೇರಿತವಾಗಿನೋಯಿಸುವುದು), 506ರ ( ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.