ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ನಂತರದ ಕಾರ್ಯತಂತ್ರ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ದೂರವಾಣಿ ಮೂಲಕ ಚರ್ಚಿಸಿದರು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾರ್ಯತಂತ್ರ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಆಮ್ ಅದ್ಮಿ ಪಕ್ಷದ (ಎಎಪಿ) ಹಿರಿಯ ಮುಖಂಡ ಸಂಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಸಿಂಗ್ ಅವರು ಈ ಮೊದಲು ಲಖನೌದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಅಖಿಲೇಶ್ ಯಾದವ್ ಟ್ವಿಟರ್ನಲ್ಲಿ ಸಿಂಗ್ ಜೊತೆಗಿರುವ ಚಿತ್ರ ಪ್ರಕಟಿಸಿದ್ದು, ‘ಆಪ್ (ಎಎಪಿ) ಕೆ ಸಾಥ್’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ‘ನಾವೂ ಕೂಡ ನಿಮ್ಮೊಂದಿಗಿದ್ದೇವೆ ಅಖಿಲೇಶ್ ಜೀ’ ಎಂದಿದ್ದಾರೆ. ಮಾಯಾವತಿ ಅವರನ್ನು ಕೇಜ್ರಿವಾಲ್ ಭೇಟಿಯಾಗಿದ್ದರು.