ತಿರುವನಂತಪುರ: ಮಹಿಳೆಯರಿಗೆ ಅಗೌರವ ತೋರುವ ವಿಚಾರದಲ್ಲಿ ಕೇರಳದ ಸಿಪಿಎಂನ ಶಾಸಕರು ಮತ್ತೆ ಮತ್ತೆ ವಿವಾದಕ್ಕೆ ಒಳಗಾಗುತ್ತಿದ್ದಾರೆ.
ದೇವಿಕುಲಂ ಉಪವಿಭಾಗಾಧಿಕಾರಿ ರೇಣು ರಾಜ್ ಅವರಿಗೆ ಬುದ್ಧಿಮತ್ತೆಯೇ ಇಲ್ಲ ಎಂದು ಶಾಸಕ ಎಸ್. ರಾಜೇಂದ್ರನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂಬುದು ವಿವಾದದ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ, ರಾಜೇಂದ್ರನ್ ಅವರಿಂದ ವಿವರಣೆ ಕೇಳಲು ಸಿಪಿಎಂ ನಿರ್ಧರಿಸಿದೆ.
ಅಧಿಕಾರಿಯ ಆರೋಪಕ್ಕೆ ರಾಜೇಂದ್ರನ್ ಅವರು ಪ್ರತಿ ಆರೋಪವನ್ನೂ ಮಾಡಿದ್ದಾರೆ. ರೇಣು ಅವರೇ ತಮ್ಮನ್ನು ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸಿಪಿಎಂ ತಿರುವನಂತಪುರ ಜಿಲ್ಲಾ ಕಚೇರಿಯಲ್ಲಿ ಐಪಿಎಸ್ ಅಧಿಕಾರಿ ಚೈತ್ರಾ ತೆರೆಸಾ ಜಾನ್ ಅವರು ಶೋಧ ನಡೆಸಿದ್ದರು. ಇದನ್ನು ಸಿಪಿಎಂ ಖಂಡಿಸಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡ ಈ ಘಟನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹರಾ ಅವರು ಅಧಿಕಾರಿಯನ್ನು ಬೆಂಬಲಿಸಿದ್ದರು.
ಸಿಪಿಎಂ ಮುಖಂಡ ಮತ್ತು ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಅವರುಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಲೆಪ್ಪಿಯ ನ್ಯಾಯಾಲಯವೊಂದು ಇತ್ತೀಚೆಗೆ ನಿರ್ದೇಶನ ನೀಡಿತ್ತು.