ನರೇಗಲ್: ಗ್ರಾಮೀಣ ಭಾಗದಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಜೆಪಿಎಲ್ ಉತ್ತಮ ವೇದಿಕೆಯಾಗಿದೆ ಎಂದು ಜೆಪಿಎಲ್ ಮುಖ್ಯಸ್ಥ ಪ್ರಕಾಶ ವಾಲಿ ಹೇಳಿದರು.ಇಲ್ಲಿಗೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಭಾನುವಾರ ನಡೆದ ಜೆಪಿಎಲ್ (ಜಕ್ಕಲಿ ಪ್ರಿಮಿಯರ್ ಲೀಗ್)ನ 4ನೇ ಆವೃತ್ತಿ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಆಗಾಗ್ಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮನುಷ್ಯನ ಮನೋಲ್ಲಾಸದ ಜತೆಗೆ ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದರೊಂದಿಗೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಪಾಲ್ಗೊಳ್ಳಬೇಕು ಎಂದರು.ಪ್ರತಿವರ್ಷ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಐಪಿಎಲ್ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಯುವಕರು ಉತ್ಸುಕತೆಯಿಂದ ಜೆಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ತೋರಬೇಕು ಎಂದರು.
ಮಾಜಿ ಸೈನಿಕ ಯಮನೂರಸಾಬ್ ನದಾಫ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಮೊಬೈಲ್ಗೆ ಅಂಟಿಕೊಂಡಿದ್ದು, ಕ್ರೀಡೆಯಿಂದ ದೂರ ಉಳಿದು ಮಾನಸಿಕವಾಗಿ ಹಾಗೂ ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತಪ್ಪದೇ ಭಾಗವಹಿಸಬೇಕು ಎಂದರು.
ಗದಗ ಉದ್ಯಮಿ ಸಿದ್ದು ಪಾಟೀಲ ಪಂದ್ಯಾವಳಿಯನ್ನು ಉದ್ಘಾಟಿಸಿದರು.ಸುರೇಶ ಶಿರೋಳ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲಮ್ಮ ಬಾಲಣ್ಣವರ, ಉದಯ ಅಮಾತಿಗೌಡ್ರ, ಶಿವರಾಜ ಮುಗಳಿ, ವಿ.ಎ.ಕುಂಬಾರ, ಮುತ್ತು ಕಡಗದ, ಲಿಂಗರಾಜ ಮುಗಳಿ ಇದ್ದರು.