ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್)ತನ್ನ ನಾಯಕನನ್ನು ಅಮಾನತು ಮಾಡಿದೆ.
ಕೋಯಿಕ್ಕೋಡ್ ಜಿಲ್ಲೆಯ ಐಯುಎಂಎಲ್ನ ಬೇಪ್ಪೂರ್ ವಿಧಾನಸಭಾ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಕೆ.ಎಂ. ಬಶೀರ್ ಅವರು ಅಮಾನತುಗೊಂಡ ನಾಯಕ.
ಗಣರಾಜ್ಯೋತ್ಸವದ ದಿನ ಕೇರಳದಾದ್ಯಂತ ಪಿಣರಾಯಿ ವಿಜಯನ್ನೇತೃತ್ವದ ಎಲ್ಡಿಎಫ್ ಸರ್ಕಾರ ಹಮ್ಮಿಕೊಂಡಿದ್ದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಬಶೀರ್ ಅವರು ಪಾಲ್ಗೊಂಡಿದ್ದರು. ಐಯುಎಂಎಲ್ ಇದರಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ ನಂತರವೂ ಪ್ರತಿಭಟನೆಯಲ್ಲಿ ಭಾಗವಹಿಸಿದಕ್ಕೆ ಪಕ್ಷ ಬಶೀರ್ ವಿರುದ್ಧ ಈ ಶಿಸ್ತುಕ್ರಮಕೈಗೊಂಡಿದೆ.
‘ಸಿಎಎ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಯಾವುದೇ ಬೇಸರವಿಲ್ಲ ಮತ್ತು ಇನ್ನಷ್ಟು ಈ ರೀತಿಯ ಪ್ರತಿಭಟನೆಗಳಲ್ಲಿ ಭಾಗವಹಿಸುತ್ತೇನೆ’ಎಂದು ಬಶೀರ್ ಹೇಳಿದ್ದಾರೆ.
ಐಯುಎಂಎಲ್ ಮಾಜಿ ನಾಯಕ, ಸಚಿವ ಕೆ.ಟಿ. ಜಲೀಲ್, ‘ಸಿಎಎ ವಿರೋಧಿ ಹೋರಾಟದಲ್ಲಿ ಸಾಕಷ್ಟು ಐಯುಎಂಎಲ್ ಕಾರ್ಯಕರ್ತರು ಭಾಗವಹಿಸಿದ್ದರು’ ಎಂದು ತಿಳಿಸಿದ್ದಾರೆ.