ತಿರುವನಂತಪುರ:ಮನೋವೈದ್ಯಶಾಸ್ತ್ರದ ವಿಭಾಗದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಕ್ಕಾಗಿಕೇರಳದಲ್ಲಿ ಏಪ್ರಿಲ್ 3ರಂದು ನಡೆದ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಯೊಂದು ಈಗ ಸದ್ದು ಮಾಡುತ್ತಿದೆ.
ಅದೇನಪ್ಪ ಪ್ರಶ್ನೆ ಅಂತೀರಾ? ಕೇರಳದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದ ವಿಚಾರದ ಕುರಿತಾದಪ್ರಶ್ನೆ ವಿವಾದ ಸೃಷ್ಟಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನ ನಂತರ ಶಬರಿಮಲೆ ದೇಗುಲ ಪ್ರವೇಶಿಸಿದ ಮೊದಲ ಮಹಿಳೆ ಯಾರು? ಎಂಬ ಪ್ರಶ್ನೆಯನ್ನು ಕೇರಳದ ಲೋಕಸೇವಾ ಆಯೋಗದ(ಪಿಎಸ್ಸಿ) ಪರೀಕ್ಷೆಯಲ್ಲಿ ಕೇಳಲಾಗಿತ್ತು. ಬಿಂದು, ಕನಕದುರ್ಗಾ, ಶಶಿಕಲಾ, ಶೋಭಾ ಈ ನಾಲ್ಕು ಉತ್ತರಗಳನ್ನು ನೀಡಲಾಗಿತ್ತು.
‘ಶಬರಿಮಲವಿವಾದದ ಕುರಿತ ಪ್ರಶ್ನೆಯನ್ನು ಕೇಳುವುದು ಸದ್ಯದ ಪರಿಸ್ಥಿತಿಯಲ್ಲಿಸರಿಯಲ್ಲ.ಪ್ರಶ್ನೆಯನ್ನು ರೂಪಿಸಿದ ತಜ್ಞರತಂಡವನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಚಿಂತಿಸಲಾಗುವುದು’ಎಂದು ಪಿಎಸ್ಸಿ ಅಧಿಕಾರಿಯೊಬ್ಬರು ತಿಳಿಸಿದರು.
‘ಲೋಕಸಭಾ ಚುನಾವಣೆಯ ಸಂದರ್ಭ ಆಗಿರುವುದರಿಂದ ಈ ಪ್ರಶ್ನೆ ವಿವಾದ ಸೃಷ್ಟಿಸಿದೆ. ಇದು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ. ಶಾ ಬಾನು ಪ್ರಕರಣದ ಕುರಿತಾಗಿಯೂ ಪ್ರಶ್ನೆ ಕೇಳಲಾಗಿದೆ. ಆದರೆ, ಪ್ರಶ್ನೆ ಪತ್ರಿಕೆ ಸಿದ್ಧತೆಯಲ್ಲಿ ಲೋಕಸೇವಾ ಆಯೋಗದ ನೇರ ಪಾತ್ರವಿರುವುದಿಲ್ಲ. ತಜ್ಞರು ಮುಚ್ಚಿದ ಲಕೋಟೆಯಲ್ಲಿ ಪ್ರಶ್ನೆ ಪತ್ರಿಕೆ ಕಳುಹಿಸುತ್ತಾರೆ’ ಎಂದು ಆಯೋಗದ ಮುಖ್ಯಸ್ಥ ಎಂ.ಕೆ. ಸಕೀರ್ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಈ ವಿವಾದವನ್ನು ಚುನಾವಣಾ ಪ್ರಚಾರದ ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.