ವಾರ್ಡ್ ನಂಬರ್ 12ರ ವ್ಯಾಪ್ತಿಗೆ ಬರುವ ಜೆ.ಟಿ.ಕಾಲೇಜು ಎದುರಿನ ರಸ್ತೆ, ಮಾಲಿಪಾಟೀಲ ಆಸ್ಪತ್ರೆಯಿಂದ ಬನ್ನಿಕಟ್ಟೆ, ಹೊನ್ನಮ್ಮ ಶಿಕ್ಷಣ ಸಂಸ್ಥೆಯ ಕಿವುಡ ಮಕ್ಕಳ ಶಾಲೆ ಎದುರಿನ ರಸ್ತೆ, ಕೊಳಗೇರಿ, ಪ್ರಸಾದ್ ಲಾಡ್ಜ್ ಬಳಿಯಿರುವ ಉಪ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಗಣಪತಿ ಗುಡಿಯ ಸುತ್ತಮುತ್ತಲಿನ ಉಪರಸ್ತೆಗಳಿಗೆ ಇಂಟರ್ ಲಾಕ್ ಅಳವಡಿಸಲಾಗಿತ್ತು. ಆದರೆ, 24X7 ನೀರಿನ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಅಗೆದ ರಸ್ತೆಗಳನ್ನು ನಂತರ ಸಮತಟ್ಟುಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರಿಂದ ರಸ್ತೆ ತುಂಬ ಉಬ್ಬುತಗ್ಗುಗಳೇ ಇವೆ. ‘ಇಲ್ಲಿ ಯಾವುದೇ ವಾಹನದಲ್ಲಿ ಸಂಚಾರ ಮಾಡಿದರೂ ಒಂಟೆಯ ಮೇಲೆ ಕುಳಿತು ಸವಾರಿ ಮಾಡಿದ ಅನುಭವವಾಗುತ್ತದೆ’ ಎಂದು ಬಡಾವಣೆಯ ನಿವಾಸಿಯೊಬ್ಬರು ಹೇಳಿದರು.