ನವದೆಹಲಿ: ಬಹು ನಿರೀಕ್ಷಿತ ಕೆಎಂಪಿ ಎಕ್ಸ್ಪ್ರೆಸ್ವೇಯನ್ನು (ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇ) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು. ಹಲವು ಅಡೆತಡೆಗಳನ್ನು ದಾಟಿ 15 ವರ್ಷಗಳ ಬಳಿಕ ಇದು ಲೋಕಾರ್ಪಣೆಗೊಂಡಿದೆ. ವಿಳಂಬಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಮೋದಿ ಅವರು ಆರೋಪಿಸಿದರು.ಇದೇ ವೇಳೆ 3.2 ಕಿ.ಮೀ ಉದ್ದದ ಭಲ್ಲಭಗಡ್–ಮುಜೇಸರ್ ಮೆಟ್ರೊ ರೈಲ್ವೆ ಸಂಪರ್ಕಕ್ಕೆ ಮೋದಿ ಅವರು ಚಾಲನೆ ನೀಡಿದರು.
***
ಮಾರ್ಗ: ಕುಂಡ್ಲಿ–ಸೋನಿಪತ್–ಪಲ್ವಾಲ್ ಆರು ಪಥದ ಹೆದ್ದಾರಿ
ಹೆದ್ದಾರಿ ಉದ್ದ: 135.6 ಕಿ.ಮೀ
ನಿರ್ಮಾಣ ಅವಧಿ: 15 ವರ್ಷ
ನಿರ್ಮಾಣ ವೆಚ್ಚ: ₹6,400 ಕೋಟಿ
ಪರಿಹಾರ: ₹2,788 ಕೋಟಿ (3,846 ಎಕರೆ ಭೂ ಸ್ವಾಧೀನ)
ಹಾದುಹೋಗುವ ಜಿಲ್ಲೆಗಳು: ಸೋನಿಪತ್, ಜಝ್ಝರ್, ಗುರುಗ್ರಾಮ, ಮೇವತ್, ಪಲ್ವಾಲ್
ಲಾಭಗಳೇನು
*ಮಾಲಿನ್ಯಭರಿತ ದೆಹಲಿಯಲ್ಲಿ ಸಂಚಾರ ದಟ್ಟಣೆ ಕಡಿತ ಸಾಧ್ಯತೆ
*50,000 ವಾಹನಗಳ ದಟ್ಟಣೆ ಕಡಿಮೆಗೊಳಿಸುವ ಅಂದಾಜು
*ರಾಷ್ಟ್ರೀಯ ಹೆದ್ದಾರಿ 1, 10, 8, 2ನ್ನು ಇದು ಸಂಪರ್ಕಿಸುತ್ತದೆ
* ಈ ಹೆದ್ದಾರಿ ಉದ್ಘಾಟನೆ ಮೂಲಕ ದೆಹಲಿಗರಿಗೆ ನಾಲ್ಕನೇ ಹೊರವರ್ತುಲ ರಸ್ತೆ ಬಳಕೆಗೆ ಸಿಗಲಿದೆ
*ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್ ಹಾಗೂ ಜಮ್ಮು–ಕಾಶ್ಮೀರಕ್ಕೆ ಇನ್ನು ನೇರ ಸಂಪರ್ಕ
*ಮನೇಸರ–ಪಲ್ವಾಲ್ ಮಾರ್ಗವನ್ನು ಕಳೆದ ವರ್ಷ ನಿತಿನ್ ಗಡ್ಕರಿ ಉದ್ಘಾಟಿಸಿದ್ದರು
ಹೆದ್ದಾರಿ ಸೌಲಭ್ಯಗಳು: ಪಾರ್ಕಿಂಗ್,ಇಂಧನ ಭರ್ತಿ ಕೇಂದ್ರ, ಪೊಲೀಸ್ ಠಾಣೆ, ಟ್ರಾಮಾ ಸೆಂಟರ್, ಹೆಲಿಪ್ಯಾಡ್, ಉಪಹಾರ ಕೇಂದ್ರ ಹಾಗೂ ಮನೋರಂಜನಾ ಸೌಲಭ್ಯ
ಹೆದ್ದಾರಿ ಏನೇನು ಒಳಗೊಂಡಿದೆ?
6 ದೊಡ್ಡ ಸೇತುವೆಗಳು
8 ಚಿಕ್ಕ ಸೇತುವೆಗಳು
ನಾಲ್ಕು ರೈಲ್ವೆ ಮೇಲ್ಸೇತುವೆಗಳು
34 ಅಂಡರ್ಪಾಸ್
64 ಪಾದಚಾರಿ ಕ್ರಾಸಿಂಗ್
7 ಟೋಲ್ ಪ್ಲಾಜಾ
ದೆಹಲಿ ಮಾಲಿನ್ಯಕ್ಕೆ ಮದ್ದು
ಕೆಎಂಪಿ ಹೆದ್ದಾರಿಯು ದೆಹಲಿಯ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ನಿರೀಕ್ಷೆ ಇದೆ. ದೊಡ್ಡ ಗಾತ್ರದ ವಾಹನಗಳು ಇನ್ನು ದೆಹಲಿ ನಗರದ ಮೂಲಕ ಹಾದು ಹೋಗುವ ಅಗತ್ಯವಿಲ್ಲ. ಉತ್ತರ ಭಾರತದ ಕಡೆಯಿಂದ ದಕ್ಷಿಣ ಹಾಗೂ ಪಶ್ಚಿಮ ಭಾಗಕ್ಕೆ ತೆರಳುವ ವಾಹನಗಳು ದೆಹಲಿಯನ್ನು ಪ್ರವೇಶಿಸಬೇಕಿಲ್ಲ.ಈ ವಾಹನಗಳಿಂದ ಶೇ 30ರಷ್ಟು ಹೊಗೆ ಕಡಿಮೆಯಾಗುವ ಅಂದಾಜು ಇದೆ. ವಾಹನಗಳ ಪ್ರಯಾಣದ ಅವಧಿಯನ್ನೂ ಈ ಹೆದ್ದಾರಿಯು ಗಣನೀಯವಾಗಿ ಕಡಿತಗೊಳಿಸಲಿದೆ.
ಕರ್ನಾಟಕ ಮಾದರಿ
ರಸ್ತೆಯ ಎರಡೂ ಬದಿಗಳಲ್ಲಿ ಬೇವಿನ ಗಿಡಗಳನ್ನು ನೆಡಲು ನಿರ್ಧರಿಸಲಾಗಿದೆ. ರಸ್ತೆ ವಿಭಜಕಗಳಲ್ಲಿ ವೈವಿಧ್ಯಮಯ ಬಣ್ಣಗಳ ಬೋಗನ್ವಿಲ್ಲಾ (ಪೇಪರ್ ಗಿಡ) ಕಂಗೊಳಿಸಲಿವೆ. ಇದಕ್ಕೆ ಕರ್ನಾಟಕ ಮಾದರಿಯಾಗಿದೆ.
ಏಟು–ಎದಿರೇಟು
2003ರಲ್ಲಿ ಆರಂಭವಾದ ಕಾಮಗಾರಿ ತಡವಾಗಿದ್ದಕ್ಕೆ ಹಿಂದಿನ ಸರಕಾರಗಳೇ ಕಾರಣ ಎಂದು ಪ್ರಧಾನಿ ದೂರಿದರು. ಎಂಟು ವರ್ಷಗಳ ಹಿಂದೆಯೇ ಕಾಮನ್ವೆಲ್ತ್ ಕ್ರೀಡಾಕೂಟದ ವೇಳೆಗೆ ಇದು ಪೂರ್ಣಗೊಳ್ಳಬೇಕಿತ್ತು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಹರಿಯಾಣ ಸರ್ಕಾರದ ಜತೆ ನಿರಂತರ ಸಂಪರ್ಕದಿಂದ ಕಾಮಗಾರಿ ಚುರುಕೊಳಿಸಿ ಜನರಿಗೆ ಅರ್ಪಿಸಿದೆ ಎಂದು ಹೇಳಿದರು.
ಮೋದಿ ಅವರ ಹೇಳಿಕೆಗಳಿಗೆ ಎದಿರೇಟು ನೀಡಿರುವ ಕಾಂಗ್ರೆಸ್ ವಕ್ತಾರರಣದೀಪ್ ಸುರ್ಜೇವಾಲಾ, ಕಾಮಗಾರಿ ಮುಗಿಯುವ ಮುನ್ನವೇ ತರಾತುರಿಯನ್ನು ಹೆದ್ದಾರಿ ಉದ್ಘಾಟಿಸಲಾಗಿದೆ ಎಂದಿದ್ದಾರೆ. ಮೋದಿ ಅವರು ಚುನಾವಣಾ ಲಾಭದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಖಾಸಗಿ ನಿರ್ವಾಹಕರಿಗೆ ತಿಂಗಳಿಗೆ ₹26 ಕೋಟಿ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.